More

    ಕಾಂಗ್ರೆಸ್​ ಅಧಿಕಾರಕ್ಕೆ ಬಂದ್ರೆ ಆಸ್ತಿ ಮರುಹಂಚಿಕೆ ಜಾರಿ!? ಏನಿದು ಪಿತ್ರಾರ್ಜಿತ ತೆರಿಗೆ? ಅರ್ಧ ಆಸ್ತಿ “ಕೈ” ಪಾಲಾಗುತ್ತಾ?

    ನವದೆಹಲಿ: ರಾಹುಲ್ ಗಾಂಧಿಯ ನಿಕಟವರ್ತಿ ಮತ್ತು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ನೀಡಿರುವ ಹೇಳಿಕೆಯೊಂದು ಕಾಂಗ್ರೆಸ್​ ಪಾಳಯದಲ್ಲಿ ಕೋಲಾಹಲ ಎಬ್ಬಿಸಿದೆ. ಅಮೆರಿಕದಲ್ಲಿ ಜಾರಿಯಲ್ಲಿರುವ ವ್ಯವಸ್ಥೆಯಿಂದ ಸ್ಪೂರ್ತಿ ಪಡೆದು ಮತ್ತೆ ಪಿತ್ರಾರ್ಜಿತ ತೆರಿಗೆ ಜಾರಿಗೆ ತರುವ ಮೂಲಕ ಸಾರ್ವಜನಿಕರಿಗೆ ಆಸ್ತಿ ಹಂಚಿಕೆ ಮಾಡುವ ತಮ್ಮ ನಿಲುವನ್ನು ಸಮರ್ಥನೆ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್​ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

    ಏನಿದು ಪಿತ್ರಾರ್ಜಿತ ತೆರಿಗೆ?
    ಅಮೆರಿಕದಲ್ಲಿ ಜಾರಿಯಲ್ಲಿರುವ ಕಾನೂನಿನ ಬಗ್ಗೆ ವಿವರಣೆ ನೀಡಿರುವ ಸ್ಯಾಮ್​ ಪಿತ್ರೋಡಾ, ಒಬ್ಬ ವ್ಯಕ್ತಿಯು 100 ಮಿಲಿಯನ್ ಡಾಲರ್​ ಮೌಲ್ಯದ ಸಂಪತ್ತನ್ನು ಹೊಂದಿದ್ದರೆ, ಆತ ಸತ್ತಾಗ ಆಸ್ತಿಯಲ್ಲಿ ಕೇವಲ 45 ಪ್ರತಿಶತವನ್ನು ಮಕ್ಕಳಿಗೆ ವರ್ಗಾಯಿಸಿ, ಉಳಿದ 55 ಪ್ರತಿಶತವನ್ನು ಸರ್ಕಾರವು ಪಡೆದುಕೊಳ್ಳುತ್ತದೆ. ನಿಮ್ಮ ಪೀಳಿಗೆಯಲ್ಲಿ, ನೀವು ಸಂಪತ್ತನ್ನು ಗಳಿಸಿದ್ದೀರಿ ಈಗ ನೀವು ಹೊರಡುತ್ತಿದ್ದೀರಿ, ನಿಮ್ಮ ಸಂಪತ್ತನ್ನು ಸಾರ್ವಜನಿಕರಿಗಾಗಿ ಬಿಡಬೇಕು ಎಂಬುದನ್ನು ಅಮೆರಿಕ ಕಾನೂನು ಹೇಳುತ್ತದೆ. ಇದು ನನಗೆ ನ್ಯಾಯೋಚಿತ ಎಂದೆನಿಸುತ್ತದೆ. ಭಾರತದಲ್ಲಿ ಈ ರೀತಿಯ ಕಾನೂನು ಇಲ್ಲ. ಇಲ್ಲಿ ಒಬ್ಬ ವ್ಯಕ್ತಿಯು 10 ಶತಕೋಟಿ ಮೌಲ್ಯದ ಆಸ್ತಿ ಹೊಂದಿದ್ದರೆ, ಆತನ ಸಾವಿನ ಬಳಿಕ ಎಲ್ಲವು ಮಕ್ಕಳಿಗೆ ಹೋಗುತ್ತದೆ. ಸಾರ್ವಜನಿಕರಿಗಾಗಿ ಏನನ್ನೂ ಬಿಡುವುದಿಲ್ಲ. ಜನರು ಇಂತಹ ವಿಚಾರಗಳ ಮೇಲೆ ಚರ್ಚೆಗಳನ್ನು ಮಾಡಬೇಕಿದೆ ಎಂದು ಸ್ಯಾಮ್​ ಪಿತ್ರೋಡಾ ಹೇಳಿದ್ದರು.

    ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ, ಪಕ್ಷವೂ ದೇಶಾದ್ಯಂತ ಸಮೀಕ್ಷೆ ಮಾಡಿ, ಯಾರು ಆಸ್ತಿಯನ್ನು ಹೊಂದಿದ್ದಾರೆ ಎಂದು ತಿಳಿದು ಅದನ್ನು ಮರು ಹಂಚಿಕೆ ಮಾಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಪ್ರಧಾನಿ ಮೋದಿಯವರು ಇತ್ತೀಚೆಗೆ ಸಮಾವೇಶವೊಂದರಲ್ಲಿ ಈ ಅಂಶವನ್ನು ಉಲ್ಲೇಖಿಸಿದ್ದಾರೆ ಎಂದು ಎಎನ್​ಐ ಸುದ್ದಿ ಸಂಸ್ಥೆಯ ಪತ್ರಕರ್ತರೊಬ್ಬರು ಹೇಳಿದ ಮಾತಿಗೆ ಪ್ರತಿಕ್ರಿಯೆ ನೀಡುವಾಗ ಸ್ಯಾಮ್ ಪ್ರಿತೋಡಾ ಅವರು ಪಿತ್ರಾರ್ಜಿತ ತೆರಿಗೆ ವ್ಯವಸ್ಥೆಯನ್ನು ಉದಾಹರಣೆ ನೀಡುವ ಮೂಲಕ ಕಾಂಗ್ರೆಸ್​ ಪಕ್ಷದ ನಿಲುವನ್ನು ಸಮರ್ಥನೆ ಮಾಡಿಕೊಂಡರು.

    ಮೋದಿ ಏನು ಹೇಳಿದ್ದರು?
    ದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ, ನಿಮ್ಮಲ್ಲಿ ಎಷ್ಟು ಆಸ್ತಿ ಇದೆ, ಎಷ್ಟು ಮನೆಗಳಿವೆ ಎಂದು ವಿಚಾರಿಸಿ ಒಂದನ್ನು ಭಾಗವನ್ನು ಕಬಳಿಸುತ್ತದೆ. ಇದಿಷ್ಟೇ ಅಲ್ಲದೆ, ಮಹಿಳೆಯರ ಮಾಂಗಲ್ಯದ ಮೇಲೆಯೂ ಕಾಂಗ್ರೆಸ್‌ ತನ್ನ ಕಣ್ಣಿಟ್ಟಿದ್ದು, ಅಧಿಕಾರಕ್ಕೆ ಬಂದರೆ ಎಲ್ಲವನ್ನು ಮುಸ್ಲಿಮರಿಗೆ ಹಂಚುತ್ತಾರೆ ಎಂದು ಇತ್ತೀಚಿನ ಸಮಾವೇಶದಲ್ಲಿ ಹೇಳಿಕೆ ನೀಡಿದ್ದರು.

    ಕಿತ್ತು ಸುಮ್ಮನೇ ಕೊಡಲಾಗುವುದಿಲ್ಲ
    ಯಾರ ಆಸ್ತಿಯನ್ನು ಕಿತ್ತು ಇನ್ನೊಬ್ಬರಿಗೆ ಕೊಡಲು ಆಗುವುದಿಲ್ಲ. ಅದಕ್ಕೆ ಸಮೀಕ್ಷೆ ಮಾಡಿ, ಕೆಲವೊಂದು ಕಾನೂನುಗಳನ್ನು ಜಾರಿಗೆ ತಂದು ಆಸ್ತಿಯನ್ನು ಮರುಹಂಚಿಕೆ ಮಾಡಬಹುದು. ಅದಕ್ಕೊಂದು ವಿಧಾನ ಇದೆ ಎನ್ನುವ ಮೂಲಕ ಅಮರಿಕದ ಪಿತ್ರಾರ್ಜಿತ ತೆರಿಗೆ ವ್ಯವಸ್ತೆಯನ್ನು ಉದಾಹರಣೆ ನೀಡಿ, ಪಕ್ಷದ ನಿಲುವನ್ನು ಪಿತ್ರೋಡಾ ಸಮರ್ಥಿಸಿಕೊಂಡಿದ್ದಾರೆ.

    ಬಿಜೆಪಿ ಕಿಡಿ
    ಇದೀಗ ಪಿತ್ರೋಡಾ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿ, ಕಾಂಗ್ರೆಸ್​ ವಿರುದ್ಧ ಮುಗಿಬಿದ್ದಿದೆ. ನುಸುಳುಕೋರರಿಗೆ ಉಡುಗೊರೆಯಾಗಿ ನೀಡಲು ನಿಮ್ಮ ಆಸ್ತಿ ಮತ್ತು ಸಂಪತ್ತನ್ನು ಕಸಿದುಕೊಳ್ಳುವುದರ ಜತೆಗೆ ಆಸ್ತಿಗಳ ಸಂಪೂರ್ಣ ಉತ್ತರಾಧಿಕಾರವನ್ನು ನಿಲ್ಲಿಸಲು ಕಾನೂನನ್ನು ತರಲು ಕಾಂಗ್ರೆಸ್​ ಬಯಸಿದೆ. ಈ ಕಾನೂನಿನ ಮೂಲಕ, ನಿಮ್ಮ ಅರ್ಧದಷ್ಟು ಸಂಪತ್ತನ್ನು ಕಿತ್ತುಕೊಂಡು ತಮ್ಮ ವೋಟ್ ಬ್ಯಾಂಕ್​ಗೆ ನೀಡಲು ರಾಹುಲ್ ಗಾಂಧಿ ಮುಂದಾಗಿದ್ದಾರೆ. ಈ ದೇಶದ ಪ್ರಾಮಾಣಿಕ, ಶ್ರಮಜೀವಿ, ಸಂಪತ್ತು ಸೃಷ್ಟಿಕರ್ತರಿಗೆ ಕಾಂಗ್ರೆಸ್ ಅಪಾಯವಾಗಿದೆ. ನಿಮ್ಮ ಎಲ್ಲಾ ಸಂಪತ್ತನ್ನು ರಾಹುಲ್ ಗಾಂಧಿ ಮತ್ತು ಅವರ ಸಂಬಂಧಿಕರು ತೆಗೆದುಕೊಳ್ಳುತ್ತಾರೆ ಮತ್ತು ಕೆಲವರಿಗೆ ಉಡುಗೊರೆಯಾಗಿ ನೀಡಲು ಎಲ್ಲವನ್ನೂ ಲೂಟಿ ಮಾಡುತ್ತಾರೆ ಎಂದು ಬಿಜೆಪಿ ಕಿಡಿಕಾರಿದೆ.

    ಕಾಂಗ್ರೆಸ್​ ಹೇಳಿದ್ದೇನು?
    ಪಿತ್ರೋಡಾ ಹೇಳಿಕೆಯಿಂದ ಕಾಂಗ್ರೆಸ್​ ಪಕ್ಷ ಅಂತರ ಕಾಯ್ದುಕೊಂಡಿದೆ. ಪಿತ್ರೋಡಾ ಅವರು ಓರ್ವ ಗೌರವಾನ್ವಿತ ವ್ಯಕ್ತಿ. ವೈಯಕ್ತಿಕ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಹಕ್ಕನ್ನು ಹೊಂದಿದ್ದರೂ, ಅವರ ಅಭಿಪ್ರಾಯಗಳು ಪಕ್ಷದ ಅಧಿಕೃತ ಹೇಳಿಕೆಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಒತ್ತಿ ಹೇಳಿದ್ದಾರೆ. (ಏಜೆನ್ಸೀಸ್​)

    ನಾನು ಮೂರು ಮದ್ವೆಯಾಗಿದ್ರೂ ಈತನೊಂದಿಗೆ ಮಾತ್ರ ತುಂಬಾ ಖುಷಿಯಾಗಿದ್ದೀನಿ! ನಟಿ ಲಕ್ಷ್ಮೀ ಓಪನ್ ಟಾಕ್

    ಒಮ್ಮೆ ಪೊದೆಯಲ್ಲಿ ಬಟ್ಟೆ ಬದಲಾಯಿಸುವಾಗ… ಯುದ್ಧಕಾಂಡ ನಟಿಯ ಬದುಕಿಗೆ ತಿರುವು ನೀಡಿತು ಆ ಒಂದು ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts