ನವದೆಹಲಿ: ವಿಧಾನಸಭೆ ಚುನಾವಣೆಯ ಬಳಿಕ ಮೈತ್ರಿ ಏರ್ಪಡಿಸಿಕೊಂಡು ಸರ್ಕಾರ ರಚಿಸಿದ ಹೊರತಾಗಿಯೂ ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಈ ಎರಡು ರಾಜ್ಯಗಳಲ್ಲೂ ರಾಜಕೀಯ ಬಂಡಾಯದ ಲಾಭ ಪಡೆದು ಬಿಜೆಪಿ ಸರ್ಕಾರ ರಚಿಸಿದೆ. ಮಧ್ಯೊಪ್ರದೇಶದ ಕಾಂಗ್ರೆಸ್ನ ಪ್ರಮುಖ ನಾಯಕ ಎನಿಸಿಕೊಂಡಿದ್ದ ಜ್ಯೋತಿರಾದಿತ್ಯ ಸಿಂಧ್ಯಾ ಬಂಡಾಯ ಎದ್ದಿದ್ದು ಬಿಜೆಪಿಗೆ ಲಾಭವಾಗಿದೆ.
ಅದರಂತೆ ಇದೀಗ ರಾಜಸ್ಥಾನದಲ್ಲೂ ಕಾಂಗ್ರೆಸ್ನ ಯುವಮುಖಂಡ, ಡಿಸಿಎಂ ಸಚಿನ್ ಪೈಲಟ್ ಕಾಂಗ್ರೆಸ್ ಆಡಳಿತದ ವಿರುದ್ಧ ಸಿಡಿದೆದ್ದಿದ್ದಾರೆ. ಅಲ್ಲದೆ, ತಮಗೆ 30ಕ್ಕೂ ಹೆಚ್ಚು ಶಾಸಕರ ಬೆಂಬಲವಿದ್ದು, ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ಅಲ್ಪಮತಕ್ಕೆ ಬಿದ್ದಿದೆ ಎಂದು ಹೇಳುತ್ತಿದ್ದಾರೆ.
ಸರ್ಕಾರದಲ್ಲಿ ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಿಲ್ಲ… ತಾವು ಹೊಂದಿರುವ ಖಾತೆಗಳಲ್ಲಿ ಸಿಎಂ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ… ಅಲ್ಲದೆ, ಸರ್ಕಾರ ರಚಿಸುವ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಶಾಸಕರ ಕುದರೆ ವ್ಯಾಪಾರದ ಬಗ್ಗೆ ತನಿಖೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಿರುವುದು ಪೈಲಟ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ವಿಧಾನಸೌಧದ ಕೊಠಡಿ ನಂ. 13ರಲ್ಲೇನಿದೆ- ಎಇಇ ಅಮಾನತು ಪ್ರಕರಣದ ಹಿಂದಿದೆ ರೋಚಕ ರಹಸ್ಯ!
ಈ ಭಿನ್ನಾಭಿಪ್ರಾಯ ಕಂದಕವನ್ನು ಕಿರಿದಾಗಿಸಲು ಕಾಂಗ್ರೆಸ್ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಅಶೋಕ್ ಗೆಹ್ಲೋಟ್ ಸೋಮವಾರ ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, 109 ಶಾಸಕರ ಬೆಂಬಲ ಇರುವುದಾಗಿ ಹೇಳಿಕೊಂಡಿದ್ದಾರೆ.
ಕರ್ನಾಟಕ ಮತ್ತು ಮಧ್ಯಪ್ರದೇಶದಂತೆ ಮತ್ತೊಂದು ರಾಜ್ಯದಲ್ಲಿನ ಆಡಳಿತವನ್ನು ಕಳೆದುಕೊಳ್ಳದಿರಲು ಹೆಣಗಾಡುತ್ತಿರುವ ಕಾಂಗ್ರೆಸ್, ಗೆಹ್ಲೋಟ್ ಮತ್ತು ಪೈಲಟ್ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಅಜಯ್ ಮಾಕೇನ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ರಾಜಸ್ಥಾನಕ್ಕೆ ಕಳುಹಿಸಿದೆ. ಇವರಿಬ್ಬರೂ ಕೂಡ ಗೆಹ್ಲೋಟ್ ಸರ್ಕಾರಕ್ಕೆ 109 ಶಾಸಕರ ಬೆಂಬಲ ಇದೆ. ಸರ್ಕಾರ ಅಳಿಯುವುದಿಲ್ಲ ಎಂದು ರಾತ್ರೋರಾತ್ರಿ 2.30ರಲ್ಲಿ ಸುದ್ದಿಗೋಷ್ಠಿ ಮಾಡಿ ಹೇಳಿದ್ದಾರೆ.
ಇಷ್ಟೆಲ್ಲ ವಿದ್ಯಮಾನಗಳ ನಡುವೆ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಉಳಿಯುತ್ತಾ, ಅಳಿಯುತ್ತಾ? ಜ್ಯೋತಿರಾದಿತ್ಯ ಸಿಂಧ್ಯಾ ಅವರಂತೆ ಸಚಿನ್ ಪೈಲಟ್ ಕೂಡ ಕೈಬಿಟ್ಟು ಬಿಜೆಪಿಯನ್ನು ಹಿಡಿಯುತ್ತಾರಾ ಎಂಬ ಕುತೂಹಲಗಳು ಸೋಮವಾರ ಸಂಜೆಯೊಳಗೆ ಬಗೆಹರಿಯುವ ಸಾಧ್ಯತೆ ಗಳಿವೆ.