ಚಿಕ್ಕಮಗಳೂರು: ಜಿಲ್ಲೆಯ ಕಾಫಿ ತೋಟಗಳಲ್ಲಿ ಹೊರ ಜಿಲ್ಲೆ ಹಾಗೂ ರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕೆಲವರು ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕಾಫಿ ತೋಟದ ಮಾಲೀಕರು ತಮ್ಮ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ವಿವರ ತಿಳಿದುಕೊಳ್ಳುವುದು ಬಹಳ ಅವಶ್ಯ ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದರು.
ಎಸ್ಪಿ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕಾಫಿ ಬೆಳೆಗಾರರ ಸಭೆಯಲ್ಲಿ ಮಾತನಾಡಿ, ಜಿಲ್ಲೆಯು ಪ್ರವಾಸಿ ತಾಣಗಳ ಜತೆಗೆ ಕಾಫಿ ಉದ್ಯಮವೂ ಪ್ರಾಮುಖ್ಯತೆ ಪಡೆದಿದೆ. ಬೆಳೆಗಾರರು ತಮ್ಮ ತೋಟದಲ್ಲಿ ಕೆಲಸ ಮಾಡುವ ಸ್ಥಳೀಯರು, ಹೊರಗಿನ ಕಾರ್ಮಿಕರ ದೂರವಾಣಿ ಸಂಖ್ಯೆ, ಪೂರ್ಣ ವಿಳಾಸ, ಆಧಾರ್ ಕಾರ್ಡ್, ಭಾವಚಿತ್ರವಿರುವ ಇತರೆ ದಾಖಲಾತಿ ಪಡೆಯುವುದು ಕಡ್ಡಾಯ. ಇತ್ತೀಚೆಗೆ ಕಾಫಿ ತೋಟಗಳಲ್ಲಿ ಕೆಲಸ ಮಾಡುವವರು ಹಾಗೂ ದಲ್ಲಾಳಿಗಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ ಎಂದರು.
ಕಾನೂನು ವ್ಯಾಪ್ತಿಯಲ್ಲಿ ಕಾರ್ಮಿಕರ ನೇಮಕ ಮಾಡಿಕೊಳ್ಳುವ ಜತೆಗೆ ನಿಯಮ ಜಾರಿ ಮಾಡುವ ಪೊಲೀಸ್ ಇಲಾಖೆ ಅಧಿಕಾರಿಗಳ ಹಾಗೂ ಆಯಾ ಸ್ಥಳೀಯ ಪೊಲೀಸರಿಗೆ ಕಾಫಿ ತೋಟದ ಮಾಲೀಕರು ಸಹಕಾರ ನೀಡಬೇಕು. ಸಂಬಂಧಿಸಿದ ಕಾರ್ಮಿಕ ಇಲಾಖೆ, ಕಾಫಿ ಬೋರ್ಡ್ ಅಥವಾ ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ಬೆಳೆಗಾರರ ಸಮಸ್ಯೆಗಳು ಹಾಗೂ ಕಾರ್ಮಿಕರ ಬಗ್ಗೆ ಮಲ್ಲಂದೂರಿನ ಉತ್ತಮ್, ಟಿ.ಒ.ಮಲ್ಲೇಶ್, ಮೂಡಿಗೆರೆಯ ಜಯರಾಂ, ಬಾಲಕೃಷ್ಣ, ವಸಂತೇಗೌಡ ಮತ್ತಿತರು ಸಭೆಯಲ್ಲಿ ಹಂಚಿಕೊಂಡರು. ಕಾಯಂ, ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದರು. ಇತ್ತೀಚೆಗೆ ಕಾಫಿ ತೋಟಗಳನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸ. ಪ್ರಕೃತಿ ಹಾಗೂ ಕಾರ್ಮಿಕರ ಸಮಸ್ಯೆ ಜತೆಗೆ ದಲ್ಲಾಳಿಗಳ ಹಾವಳಿಯಿಂದ ತೋಟಗಳನ್ನು ಉಳಿಸಿಕೊಳ್ಳಬೇಕಿದೆ. ಈ ಬಗ್ಗೆ ಸ್ಥಳೀಯವಾಗಿ ಇಂತಹ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.