ಬೆಂಗಳೂರು: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಮತದಾರರಿಗೆ ನೀಡಿದ್ದ ಭರವಸೆಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಲು ಸಂಪುಟದಲ್ಲಿನ ಎಲ್ಲಾ ಸ್ಥಾನಗಳನ್ನು ಭರ್ತಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ನೂತನ ಸಂಪುಟ ಸಚಿವರ ಜೊತೆ ಅನೌಪಚಾರಿಕ ಸಭೆ ಬಳಿಕ ಮಾತನಾಡಿದ ಸಿಎಂ ಗ್ಯಾರಂಟಿಗಳನ್ನು ಜಾರಿ ಮಾಡುವ ಕುರಿತು ಮುಂದಿನ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದ್ದಾರೆ.
ಪೂರ್ಣ ಪ್ರಮಾಣದ ಸಂಪುಟ
ನೂತನ ಸಚಿವರಿಗೆ ಖಾತೆ ಹಂಚಿಕೆ ಶನಿವಾರ ಅಥವಾ ಭಾನುವಾರದೊಳಗಡೆ ಮಾಡುತ್ತೇವೆ. ಗ್ಯಾರಂಟಿಗಳನ್ನು ಈಡೇರಿಸುವ ಸಲುವಾಗಿ ಪೂರ್ಣ ಪ್ರಮಾಣದ ಸಂಪುಟ ರಚನೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಸಿಎಂ ಬಿಟ್ಟು 33 ಮಂದಿಯನ್ನು ಸಂಪುಟ ದರ್ಜೆ ಸಚಿವರನ್ನಾಗಿ ಮಾಡಿದ್ದೇವೆ. ಮೊದಲ ಬಾರಿ ಗೆದ್ದವರಿಗೆ ಮಂತ್ರಿ ಮಾಡಿಲ್ಲ, ಮೂರು ಬಾರಿ, ನಾಲ್ಕನೆಯ ಬಾರಿ ಗೆದ್ದವರನ್ನ ಸಚಿವರನ್ನಾಗಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಆಟವಾಡುತ್ತಿದ್ದ ವೇಳೆ ಶಾಲೆಯ ಟೆರೇಸ್ನಿಂದ ಬಿದ್ದ ಬಾಲಕಿ; ಹತ್ಯೆ ಶಂಕೆ ವ್ಯಕ್ತಪಡಿಸಿದ ಮೃತಳ ತಂದೆ
ಭರವಸೆ ಈಡೇರಿಸುತ್ತೇವೆ
ಹೊಸ ಮುಖ, ಹಿರಿಯರು ಎಲ್ಲರನ್ನೂ ಸೇರಿಸಿ ಸಚಿವ ಸಂಪುಟ ರಚನೆ ಮಾಡಿದ್ದೇವೆ. ಜನ ನಮಗೆ ಬೆಂಬಲ ನೀಡಿದ್ದಾರೆ ಹೀಗಾಗಿ ನಾವು ಕೊಟ್ಟಿರುವ ಭರವಸೆ ಈಡೇರಿಸಬೇಕು ಗ್ಯಾರಂಟಿಗಳನ್ನ ಜನರಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ವಿಪಕ್ಷಗಳು ಜನತೆಗೆ ಕೊಟ್ಟ ಭರವಸೆ ಈಡೇರಿಸಿಲ್ಲ ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ. ಅಧಿಕಾರಿಗಳಿಂದ ಅಂಕಿ ಅಂಶ ಪಡೆಯುತ್ತಿದ್ದೇವೆ ಮುಂದಿನ ಕ್ಯಾಬಿನೆಟ್ನಲ್ಲಿ ಐದು ಭರವಸೆ ಈಡೇರಿಸುತ್ತೇವೆ ಎಂದು ಹೇಳಿದ್ದಾರೆ.
ಕೆಲವು ಮಾನದಂಡದ ಮೇಲೆ ಹೊಸಬರು ಹಾಗೂ ಹಳಬರ ಮಿಶ್ರಣದ ಸಂಪುಟ ರಚಿಸಿದ್ದೇವೆ ಹೀಗಾಗಿ ಕೆಲವು ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಇಂತಹ ಸಂದರ್ಭದಲ್ಲಿ ಅಸಮಾಧಾನ ಸಹಜ ಮುಮದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.