ನವದೆಹಲಿ: ನಾವು ಪ್ರತಿನಿತ್ಯ ಸೈಬರ್ ಕ್ರೈಂ/ವಂಚನೆಗಳ ಬಗ್ಗೆ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೇವೆ. ಇದರ ಹೊರತ್ತಾಗಿಯೂ ಜನ ಮೋಸ ಹೋಗಿರುವುದನ್ನು ನಾವು ಕೇಳಿರುತ್ತೇವೆ.
ಇದೀಗ ಪ್ರಕರಣ ಒಂದರಲ್ಲಿ ಬ್ಯಾಂಕ್ ಅಧಿಕಾರಿ ಒಬ್ಬರು ಉಚಿತ ಕೊಡುಗೆಯ ಆಸೆಗೆ ಒಳಗಾಗಿ 90,000 ಸಾವಿರ ರೂಪಾಯಿ ಕಳೆದುಕೊಂಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಜಾಹೀರಾತು ನೋಡಿ ಮೋಸ
ಬ್ಯಾಂಕ್ ಒಂದರಲ್ಲಿ ಹಿರಿಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ಸವಿತಾ ಶರ್ಮಾ(40) ಒಂದನ್ನು ತೆಗೆದುಕೊಂಡರೆ ಮತ್ತೊಂದು ಉಚಿತ ನೀಡುವ ಜಾಹೀರಾತಿನ ಕುರಿತು ಹೇಳಿದ್ದಾರೆ.
ತನ್ನ ಸಂಬಂಧಿ ಹೇಳಿದಂತೆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿದ್ದ ಪುಟವನ್ನು ವೀಕ್ಷಿಸಿದ್ದಾರೆ ಮತ್ತು ಅಲ್ಲಿ ನೀಡಲಾಗಿದ್ದ ನಂಬರ್ ಒಂದಕ್ಕೆ ಮಾಹಿತಿ ಪಡೆಯಲು ಕರೆ ಮಾಡಿದ್ದಾರೆ. ಮೊದಲಿಗೆ ಕರೆ ಸ್ವೀಕರಿಸದ ವಂಚಕ ಬಳಿಕ ಮಹಿಳೆಗೆ ವಾಪಸ್ ಕರೆ ಮಾಡಿ ದೆಹಲಿಯ ಪ್ರತಿಷ್ಠಿತ ಹೋಟೆಲ್(ಸಾಗರ್ ಆರ್ಯ)ನ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದಾನೆ.
ಫೋನ್ ಹ್ಯಾಕ್
ಇದಾದ ಬಳಿಕ ವಂಚಕ ಮಹಿಳೆಗೆ ಲಿಂಕ್ ಒಂದನ್ನು ಕಳುಹಿಸಿ ಆ್ಯಪ್ ಡೌನ್ಲೋಡ್ ಮಾಡುವಂತೆ ಸೂಚಿಸಿ ಐಡಿ ಮತ್ತು ಪಾಸ್ವರ್ಡ್ ಒಂದನ್ನು ಕಳುಹಿಸಿದ್ದಾನೆ. ವಂಚಕ ಹೇಳಿದಂತೆ ಮಹಿಳೆ ಆ್ಯಪ್ ಡೌನ್ಲೋಡ್ ಮಾಡಿ ಐಡಿ ಮತ್ತು ಪಾಸ್ವರ್ಡ್ಅನ್ನು ನಮೂದಿಸಿದ್ದಾರೆ.
ಐಡಿ ಪಾಸ್ವರ್ಡ್ ನಮೂದಿಸಿದ ಕೆಲವೇ ಸೆಕೆಂಡುಗಳ ಬಳಿಕ ಮಹಿಳೆಯ ಫೋನ್ ಹ್ಯಾಕ್ ಆಗಿದ್ದು ಮೊದಲಿಗೆ ಅವರ ಬ್ಯಾಂಕ್ ಖಾತೆಯಿಂದ 40,000 ಸಾವಿರ ರೂಪಾಯಿ ಕೆಲ ಕ್ಷಣಗಳ ಬಳಿಕ 50,000 ಸಾವಿರ ರೂಪಾಯಿ ಮೊತ್ತವನ್ನು ವಂಚಕರು ಎಗರಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯರ ಮೇಲೆ ಪೊಲೀಸರ ದಾಳಿ; ಮನಸೋ ಇಚ್ಛೆ ಥಳಿತ
ಹೋಟೆಲ್ ಹೆಸರಲ್ಲಿ ವಂಚನೆ
ಬಳಿಕ ವಂಚಕ ಮಹಿಳೆಯ ಕ್ರೆಡಿಟ್ ಕಾರ್ಡ್ನಿಂದ ಹಣವನ್ನು ಪೇಟಿಎಂಗೆ ವರ್ಗಾಯಿಸಿ ಬಳಿಕ ಅದನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಆದರೆ, ಮಹಿಳೆ ಹೇಳುವ ಪ್ರಕಾರ ವಂಚಕನಿಗೆ ತಮ್ಮ ಬ್ಯಾಂಕ್ ಸೇರಿದಂತೆ ಯಾವುದೇ ವಿವರಗಳನ್ನು ಹಂಚಿಕೊಂಡಿರಲಿಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಸೈಬರ್ ಸೆಲ್ನ ಹಿರಿಯ ಅಧಿಕಾರಿ ಒಬ್ಬರು ಕಳೆದ ಕೆಲವು ದಿನಗಳಿಂದ ಸಾಗರ್ ರತ್ನ ಹೋಟೆಲ್ ಹೆಸರಿನಲ್ಲಿ ವಂಚಕರು ಅನೇಕರಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಅಲ್ಲಿನ ಸಿಬ್ಬಂದಿಯನ್ನು ವಿಚಾರಿಸಿದಾಗ ಗ್ರಾಹಕರು ಮೋಸ ಹೋಗಿರುವ ಬಗ್ಗೆ ತಮ್ಮ ಬಳಿ ಅನೇಕರು ದೂರು ದಾಖಲಿಸಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.