ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಕಾಂಗ್ರೆಸ್ ಚುನಾವಣಾಪೂರ್ವದಲ್ಲಿ ನೀಡಿದ್ದ ಐದು ‘ಗ್ಯಾರಂಟಿ’ಗಳ ಕುರಿತು ಜನರು ಭಾರಿ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಈ ‘ಗ್ಯಾರಂಟಿ’ಗಳು ಯಾವಾಗ ಜಾರಿ ಆಗಲಿದೆ ಎಂದು ಜನರು ಕಾಯುತ್ತಿದ್ದರೆ, ಪ್ರತಿಪಕ್ಷಗಳು ಬೇಗ ಜಾರಿ ಮಾಡುವಂತೆ ಕೆಣಕಲಾರಂಭಿಸಿವೆ. ಈ ಎಲ್ಲದರ ನಡುವೆ ‘ಗ್ಯಾರಂಟಿ’ಗಳ ಜಾರಿ ಗ್ಯಾರಂಟಿ ಎಂದು ಪುನರುಚ್ಚರಿಸುತ್ತಿರುವ ಸಿಎಂ ಮತ್ತಿತರ ಕಾಂಗ್ರೆಸ್ ನಾಯಕರು ಇಂದು ಮಹತ್ವದ ಸಭೆ ನಡೆಸಿದ್ದಾರೆ.
‘ಗ್ಯಾರಂಟಿ’ ಯೋಜನೆ ಅನುಷ್ಠಾನ ಬಗ್ಗೆ ಸಭೆಯಲ್ಲಿ ಭಾರಿ ಚರ್ಚೆ ನಡೆದರೂ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಸಚಿವರ ಜೊತೆ ನಡೆಸ ಸಭೆಯಲ್ಲಿ ಸಿಎಂ ಸಮಗ್ರ ಅಭಿಪ್ರಾಯ ಆಲಿಸಿದರು. ‘ಗ್ಯಾರಂಟಿ’ ಯೋಜನೆಗಳ ಪರಮಾಧಿಕಾರವನ್ನು ಸಭೆಯಲ್ಲಿ ಸಿಎಂಗೇ ನೀಡಲಾಯಿತಾದರೂ, ಸಿಎಂ ನಾಳೆ ಮತ್ತೊಮ್ಮೆ ಅಧಿಕಾರಿಗಳ ಸಭೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರುವುದಾಗಿ ತಿಳಿಸಿದರು. ಮಾತ್ರವಲ್ಲ ಇನ್ನಷ್ಟು ಚರ್ಚೆಯ ಹಿನ್ನಲೆಯಲ್ಲಿ ನಾಳೆಯ ಸಂಪುಟ ಸಭೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.
ಇದನ್ನೂ ಓದಿ: ಪತಿಗಿಂತ ಪತ್ನಿಗೇ ಹೆಚ್ಚು ಸಂಪಾದನೆ; ಜೀವನಾಂಶ ನೀಡಲಾಗದು ಎಂಬುದನ್ನು ಎತ್ತಿ ಹಿಡಿದ ಕೋರ್ಟ್
ಇದಕ್ಕೂ ಮುನ್ನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ‘ಗ್ಯಾರಂಟಿ’ ಜಾರಿ ಬೇಗ ಆಗಬೇಕು ಎಂದು ಸಚಿವರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಇಲಾಖಾವಾರು ಅನುದಾನ ಖೋತಾ ಆದರೂ ‘ಗ್ಯಾರಂಟಿ’ ಜಾರಿ ಆಗಬೇಕು ಎಂದು ಸಚಿವರು ಮನವಿ ಮಾಡಿಕೊಂಡರು.
‘ಗ್ಯಾರಂಟಿ’ ಜಾರಿ ಸಲುವಾಗಿ ದೊಡ್ಡ ಯೋಜನೆಗಳ ಅನುಷ್ಠಾನಕ್ಕೆ ಕಾಲಾವಕಾಶ ಪಡೆದುಕೊಳ್ಳಬಹುದು. ಈಗಾಗಲೇ ರಾಜ್ಯ ಸರ್ಕಾರ ಪಡೆದುಕೊಂಡಿರುವ ಸಾಲದ ಮರುಪಾವತಿ ಅವಧಿ ವಿಸ್ತರಣೆ ಕೂಡ ಮಾಡಿಕೊಳ್ಳಬಹುದು ಎಂದು ಕೆಲವು ಸಚಿವರು ಸಲಹೆ ನೀಡಿದರು.
ಇದನ್ನೂ ಓದಿ: ಒಬ್ಬ ಮಗನ ಚಿಕಿತ್ಸೆಗಾಗಿ ಇನ್ನೊಬ್ಬ ಮಗನನ್ನು ಮಾರಲೆತ್ನಿಸಿದ ತಂದೆ; ಪತಿ ವಿರುದ್ಧ ಪತ್ನಿಯ ದೂರು
ಮುಖ್ಯ ಕಾರ್ಯದರ್ಶಿ ವಿವರಣೆ: ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಸಭೆಯ ಆರಂಭದಲ್ಲಿ ಮಾಹಿತಿ ನೀಡುತ್ತ, ‘ಗ್ಯಾರಂಟಿ’ ಜಾರಿಗೆ ಬೇಕಿರುವ ಅನುದಾನಗಳು, ಸದ್ಯದ ಆರ್ಥಿಕ ಸ್ಥಿತಿಗತಿಗಳ ಕುರಿತು ವಿವರಣೆ ನೀಡಿದರು.
‘ಗ್ಯಾರಂಟಿ’ ಯೋಜನೆಗಳ ಕುರಿತು ಸಾರ್ವಜನಿಕವಾಗಿ ಭಾರಿ ಚರ್ಚೆ ಆಗುತ್ತಿದೆ. ಮುಂದಿನ ಲೋಕಸಭೆ, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಹಾಗೂ ಬಿಬಿಎಂಪಿ ಚುನಾವಣೆಗಳ ಬಗ್ಗೆಯೂ ಸಚಿವರು ಗಮನ ಸೆಳೆದರು. ಈ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡಬೇಕು. ‘ಗ್ಯಾರಂಟಿ’ ಯೋಜನೆಗೆ ಸಿಕ್ಕಾಪಟ್ಟೆ ಷರತ್ತುಗಳನ್ನು ಹಾಕಿದರೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಬಹುದು. ಪ್ರತಿಪಕ್ಷಗಳು ರಾಜಕೀಯವಾಗಿ ಬಳಸಿಕೊಳ್ಳುತ್ತವೆ ಎಂದು ಸಲಹೆ ನೀಡಿದ ಕೆಲ ಸಚಿವರು, ಆರ್ಥಿಕ ಸಂಪನ್ಮೂಲ ನೋಡಿಕೊಂಡು ತೀರ್ಮಾನಿಸಿ ಎಂದರು.
ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಈಗಿಂದಲೇ ಬಿಜೆಪಿ ಸಜ್ಜು; ಸಂಸದರ ಸಭೆ, ಭಾರಿ ಚರ್ಚೆ, ಮಹತ್ವದ ನಿರ್ಣಯಗಳು
ಅನುದಾನ ಖೋತಾ ಆತಂಕ: ‘ಗ್ಯಾರಂಟಿ’ಗಳ ಅನುಷ್ಠಾನದಿಮದ ಇಲಾಖಾವಾರು ಅನುದಾನ ಖೋತಾ ಆಗುವ ಭೀತಿಯನ್ನೂ ಸಿಎಂ-ಸಚಿವರ ಸಭೆಯಲ್ಲಿ ಕೆಲವು ಸಚಿವರು ವ್ಯಕ್ತಪಡಿಸಿದರು. ‘ಗ್ಯಾರಂಟಿ’ ಯೋಜನೆಗಳ ಜಾರಿಯಿಂದಾಗಿ, ತಮಗೆ ಸಿಕ್ಕಿರುವ ಇಲಾಖೆಯಲ್ಲಿ ಅನುದಾನ ಕೊರತೆಯಾದರೆ ಏನು ಎಂಬ ಚಿಂತೆಯನ್ನೂ ಕೆಲವರು ವ್ಯಕ್ತಪಡಿಸಿದರು.