ಬೆಂಗಳೂರು: ಕರೊನಾ ವೈರಸ್ ಗಂಭೀರತೆಯನ್ನು ಅರಿತು, ಮನೆಯಿಂದ ಹೊರಗೆ ಓಡಾಡುವುದನ್ನು ನಿಲ್ಲಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಜನತೆಯ ಬಳಿ ಮನವಿ ಮಾಡಿಕೊಂಡರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯುಗಾದಿ ಪೂಜೆಯನ್ನು ಮನೆಯಲ್ಲೇ ಮಾಡಿ ಆಚರಿಸಿ. ಮಾರುಕಟ್ಟೆಗೆ ಓಡಾಡುವುದನ್ನು ನಿಲ್ಲಿಸಿ. ಮನೆಯಲ್ಲೇ ಕುಳಿತು ಹೋಟೆಲ್ನಿಂದ ಪಾರ್ಸೆಲ್ ತರಿಸಿಕೊಳ್ಳಿ ಎಂದು ವಿನಂತಿಸಿಕೊಂಡರು. ಅಲ್ಲದೆ, ಇಂದಿರಾ ಕ್ಯಾಂಟಿನ್ ಬಳಿ ಹೆಚ್ಚು ಜನರು ಸೇರುತ್ತಿರುವ ಹಿನ್ನೆಲೆಯಲ್ಲಿ ಕ್ಯಾಂಟಿನ್ ಬಂದ್ ಮಾಡುವುದಾಗಿ ಹೇಳಿದರು.
ದಿನಪತ್ರಿಕೆ, ಹಾಲು, ಹಣ್ಣು ಹಾಗೂ ಔಷಧಿಗಳಿಗೆ ಪೊಲೀಸರು ಅಡ್ಡಿ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ಪೊಲೀಸರಿಗೆ ಇಂಥದ್ದಕ್ಕೆಲ್ಲ ಅಡ್ಡಿ ಮಾಡಬೇಡಿ ಎಂದು ಸೂಚನೆ ಕೊಟ್ಟಿದ್ದೇವೆ. ನಗರದಲ್ಲಿ ಕರ್ಫ್ಯೂ ವಾತಾವರಣ ಇದೆ. ಅನಗತ್ಯ ಓಡಾಡಿದರೆ ಪೊಲೀಸರು ಕ್ರಮ ತಗೋಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮನೆಬಿಟ್ಟು ಹೊರಗಡೆ ಓಡಾಡಿದರೆ ಕ್ರಮ ಕೈಗೊಳ್ಳುವುದು ಗ್ಯಾರಂಟಿ. ಪೊಲೀಸರು ಏನಾದರೂ ಕ್ರಮ ಕೈಗೊಂಡ್ರೆ ನನ್ನನ್ನಾಗಲಿ ಅಥವಾ ಸರ್ಕಾರವನ್ನಾಗಲಿ ದೂಷಿಸಬೇಡಿ. ಇದು ಕೊನೆಯ ಎಚ್ಚರಿಕೆ ಎಂದರು. (ದಿಗ್ವಿಜಯ ನ್ಯೂಸ್)