ಬಿ.ಎಸ್.ಯಡಿಯೂರಪ್ಪ ನಾಲ್ಕು ಬಾರಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲು, ಪಕ್ಷದ ವರ್ಚಸ್ವಿ ನಾಯಕರಾಗಿ ರೂಪುಗೊಳ್ಳಲು ತೆರೆಮರೆಯಲ್ಲಿ ಅನೇಕರ ಯೋಗದಾನವಿದೆ. ಬಿಎಸ್ವೈ ಆರ್ಎಸ್ಎಸ್ ಸ್ವಯಂ ಸೇವಕರು ಎಂಬ ಕಾರಣಕ್ಕೆ ಅನೇಕ ಆರ್ಎಸ್ಎಸ್ ಪ್ರಮುಖರು ಸಹಜವಾಗಿಯೇ ಬೆನ್ನಹಿಂದೆ ನಿಂತು ಮಾರ್ಗದರ್ಶನ ನೀಡಿದ್ದಾರೆ. ಸ್ವರ್ಗೀಯ ಮೈ.ಚ.ಜಯದೇವ್ ಅವರಿಂದ ಆರಂಭವಾಗಿ ಮತ್ತೂರಿನ ಪಟ್ಟಾಭಿರಾಮ್ ವರೆಗೆ ಅನೇಕರು ಕಾಲದಿಂದ ಕಾಲಕ್ಕೆ ಯಡಿಯೂರಪ್ಪಗೆ ಸೂಕ್ತ ಸಲಹೆ ನೀಡಿ ಬೆನ್ನಿಗೆ ನಿಂತಿದ್ದಾರೆ. ಬಿಎಸ್ವೈ
ಶಿವಮೊಗ್ಗಕ್ಕೆ ಬಂದ ಬಳಿಕ ಹಿರಿಯೂರು ಕೃಷ್ಣಮೂರ್ತಿ, ಬಾ.ಮ.ಶ್ರೀಕಂಠಯ್ಯ, ಪ್ರೊ.ಪಿ.ವಿ.ಕೃಷ್ಣಭಟ್ ಮಾರ್ಗದರ್ಶಕರಾದರು. ಪ್ರಸ್ತುತ ಮತ್ತೂರಿನ ಪಟ್ಟಾಭಿರಾಮ್ ಕೂಡ ಯಡಿಯೂರಪ್ಪರಿಗೆ ಸಲಹೆ ಸಹಕಾರ ನೀಡಿದವರು.
ಗಾಡ್ಫಾದರ್ ರೀತಿ ಯಡಿಯೂರಪ್ಪರನ್ನು ಹಿರಿಯೂರು ಕೃಷ್ಣಮೂರ್ತಿಗಳು ಎಲ್ಲ ಸಂದರ್ಭದಲ್ಲೂ ತಿದ್ದಿ ತೀಡಿದ್ದರು. ಕೆಲ ವರ್ಷಗಳ ಹಿಂದೆ ಹಿರಿಯೂರು ಕೃಷ್ಣಮೂರ್ತಿಗಳು ನಿಧನರಾದಾಗ ಬಿಎಸ್ವೈ ತುಂಬಾ ನೊಂದುಕೊಂಡಿದ್ದರು. ಶಿವಮೊಗ್ಗ ಬಿಜೆಪಿಯಲ್ಲಿ ಡಿ.ಎಚ್.ಶಂಕರಮೂರ್ತಿ, ಟಿ.ಜಿ.ಶ್ರೀಧರರಾವ್, ಮಾಜಿ ಶಾಸಕ ಎಂ.ಆನಂದರಾವ್ ಪಕ್ಷ ಸಂಘಟನೆಯಲ್ಲಿ ಬಿಎಸ್ವೈಗೆ ಅಗತ್ಯ ಸಹಕಾರ ಸಲಹೆ ನೀಡಿದವರು. ವಯಸ್ಸಿನಲ್ಲಿ ಬಿಎಸ್ವೈಗಿಂತ ಹಿರಿಯರಾಗಿದ್ದ ಈ ಮೂವರು ಸಂಘಟನೆ, ಹೋರಾಟ ಎಲ್ಲದರಲ್ಲೂ ಮಾರ್ಗದರ್ಶನ ನೀಡಿದವರು.
ಶಿಕಾರಿಪುರದಲ್ಲಿ ಜೈನ ಮುಖಂಡ ಉಗಂ ರಾಜ್, ಡಾ. ವಿಜಯ್ ಸಂಗಮ್ೇವ್, ಎ.ಎಸ್.ಪದ್ಮನಾಭ ಭಟ್, ಕೃಷ್ಣ ಸಿಂಗ್, ಎಸ್.ಬಿ.ಮಠದ್, ಅಂಗಡಿ ರಾಮಣ್ಣ… ಹೀಗೆ ಯಡಿಯೂರಪ್ಪರನ್ನು ಏಕವಚನದಲ್ಲಿ ಕರೆಯಬಹುದಾದ ಅನೇಕ ಒಡನಾಡಿಗಳು ಒಂದಾಗಿದ್ದರು. ಈ ಪೈಕಿ ಕೆಲವರು ಈಗಿಲ್ಲ. ಅಂಗಡಿ ರಾಮಣ್ಣ ಈಗಲೂ ಬಿಎಸ್ವೈ ಜತೆ ಕುಳಿತು ಸಲುಗೆಯಿಂದ ಮಾತನಾಡುವವರ ಪೈಕಿ ಒಬ್ಬರು. ರಾಜಕೀಯದ ಆರಂಭ ದಿನಗಳಲ್ಲಿ ಬಿಎಸ್ವೈ ರಾಜ್ಯ ಪ್ರವಾಸ ಮಾಡುತ್ತಿದ್ದ ಸಂದರ್ಭದಲ್ಲಿ ಕುಟುಂಬದತ್ತ ಗಮನ ಕೊಡುತ್ತಿದ್ದದ್ದು ಕಡಿಮೆ. ಈ ವೇಳೆ ಅವರ ಕುಟುಂಬಕ್ಕೆ ಸಾಲದ ರೂಪದಲ್ಲಿ ದಿನಸಿ ಸಾಮಗ್ರಿ ನೀಡುತ್ತಿದ್ದದ್ದು ಇದೇ ಅಂಗಡಿ ರಾಮಣ್ಣ. ಮಾತ್ರವಲ್ಲ ಬಿಎಸ್ವೈಗೆ ಆರ್ಥಿಕವಾಗಿ ಬೆಂಬಲ ನೀಡಿದ್ದೂ ಇವರೇ.
ಇಂದು ಯಡಿಯೂರಪ್ಪ ಯಶಸ್ವಿ ರಾಜಕಾರಣಿ ಎನಿಸಿದ್ದರೆ ಅದರ ಹಿಂದೆ ಅನೇಕರ ಕೊಡುಗೆಯಿದೆ. ಹಲವರು ತೆರೆಮರೆಯಲ್ಲೇ ಬಿಎಸ್ವೈಗೆ ನೆರವು ನೀಡಿ ಇಂದಿಗೂ ನೈಪಥ್ಯದಲ್ಲೇ ಉಳಿದಿದ್ದಾರೆ. ಆದರೆ ಯಡಿಯೂರಪ್ಪ ಹಾಗೂ ಅವರ ಕುಟುಂಬ ತಮ್ಮ ಕಷ್ಟ ಕಾಲದಲ್ಲಿ ನೆರವಾದ ಯಾರನ್ನೂ ಮರೆತಿಲ್ಲ.