ಮೈಸೂರು: ಕನ್ನಡದ ನಂ. 1 ದಿನಪತ್ರಿಕೆ “ವಿಜಯವಾಣಿ’ ಹಾಗೂ “ದಿಗ್ವಿಜಯ’ ಸುದ್ದಿವಾಹಿನಿ ಆಯೋಜಿಸಿರುವ ಮೂರು ದಿನಗಳ “ರಾಜ್ಯಮಟ್ಟದ ಕೃಷಿ ಮೇಳ’ದ ಮೆರವಣಿಗೆ ಅದ್ದೂರಿಯಾಗಿ ನಡೆದಿದ್ದು ವಿವಿಧ ಕಲಾ ತಂಡಗಳು ಉತ್ಸಾಹದಿಂದ ಭಾಗವಹಿಸಿವೆ. ಈ ಸಂದರ್ಭ ನಂದಿ ಕೋಲು ಪೂಜೆಯೂ ನಡೆದಿದ್ದು ಜನರ ಕಣ್ಮನ ಸೆಳೆದಿದೆ.
ಕಾರ್ಯಕ್ರಮದ ಸ್ಥಳಕ್ಕೆ ಬಂದ ಮುಖ್ಯಮಂತ್ರಿಯನ್ನು ಶಿವ ಸಂಕೇಶ್ವರ ಸ್ವಾಗತಿಸಿದರು. ನಂತರ ದೇವರ ದರ್ಶನ ಪಡೆದ ಸಿಎಂ ಬೊಮ್ಮಾಯಿ ಎಲೆಕ್ಟ್ರಿಕ್ ವಾಹನದಲ್ಲಿ ವೇದಿಕೆ ಬಳಿಗೆ ತಲುಪಿದರು. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ಕಂದಾಯ ಸಚಿವ ಆರ್ ಅಶೋಕ್ ಹಾಗೂ ಗೋವಿಂದ ಕಾರಜೋಳ ಉಪಸ್ಥಿತರಿದ್ದರು.
ಕೃಷಿ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ‘ನಂ.1 ಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ಜಂಟಿಯಾಗಿ ಕೃಷಿ ಮೇಳವನ್ನು ಮೈಸೂರಿನಲ್ಲಿ ಆಯೋಜಿಸಿದ್ದಾರೆ. ಕಳೆದ ವರರ್ಷದ ಕೃಷಿ ಮೇಳದಲ್ಲೂ ನಾನು ಭಾಗವಹಿಸಿದ್ದೆ. ಕೃಷಿಯಲ್ಲಿ ಹೊಸ ಪದ್ಧತಿಯ ಟೆಕ್ನಾಲಜಿಯ ಪರಿಚಯ, ಕೃಷಿ ಉತ್ಪನ್ನಗಳ ಮಾರುಕಟ್ಟೆ. ಹೀಗೆ ಎಲ್ಸುಲವೂ ಬೇಕು. ಸ್ಥಿರವಾದ ಕೃಷಿಯ ಅಭಿವೃದ್ಧಿಯನ್ನು ಸಾರುವ ಈ ಕಾರ್ಯಕ್ರಮದಲ್ಲಿ 2-3 ಲಕ್ಷ ಜನರು ಭಾಗವಹಿಸಿ ಲಾಭ ಪಡೆದುಕೊಂಡಿದ್ದಾರೆ. ಇದು ನಿಜಕ್ಕೂ ಪ್ರಶಂಸನೀಯ.
ಕೃಷಿ ಎನ್ನುವಂತಹದ್ದು ಮನುಷ್ಯನ ಬದುಕಿನೊಂದಿಗೆ ಬಂದಿದೆ. ಸಾವಿರಾರು ವರ್ಷಗಳಿಂದ ಉತ್ತು ಬಿತ್ತು ಕೃಷಿ ಮಾಡುತ್ತಿದ್ದೇವೆ. ನಮ್ಮಲ್ಲಿ ಹಸಿರು ಕ್ರಾಂತಿ ಆಗಿದೆ. ಇವತ್ತು ಹಸಿರು ಕ್ರಾಂತಿ ಮಾಡಿದ ರೈತನ ಪರಿಸ್ಥಿತಿ ಎಲ್ಲಿತ್ತೋ ಅಲ್ಲೇ ಇದೆ. ಬರುವಂತಹ ದಿನಗಳಲ್ಲಿ ರಾಜ್ಯ ಸರ್ಕಾರ ರೈತನ ಕೇಂದ್ರೀಕೃತವಾಗಿರುವ ಕಾರ್ಯಕ್ರಮ ಕೊಡಲಿಕ್ಕಿದೆ. ಲ್ಯಾಂಡ್ ಟು ಕ್ರೆಡಿಟ್ ರೇಷ್ಯೋ ಎನ್ನುವ ವಿಚಾರ ಒಂದಿದೆ. ಅದರ ಪ್ರಕಾರ ಇಷ್ಟು ಎಕರೆ ಜಮೀನಿನಲ್ಲಿ ಯಾವ ಬೆಳೆಯನ್ನು ಬೆಳೆಯಲು ಎಷ್ಟು ಖರ್ಚು ಆಗುತ್ತೆ ಎನ್ನುವುದನ್ನು ನಿರ್ಧರಿಸುತ್ತದೆ. ಇದನ್ನು ಯಾವ ಬ್ಯಾಂಕ್ ಕೂಡ ಪಾಲಿಸುತ್ತಿಲ್ಲ. ಹೀಗಾಗಿ ರೈತರಿಗೆ ಸಾಲ ಸರಿಯಾಗಿ ಸಿಗುತ್ತಿಲ್ಲ’ ಎಂದರು.
ಇದೇ ಸಂದರ್ಭದಲ್ಲಿ ರೈತರಿಗೆ ನೀಡುವ ಸಾಲ ಬದಲಾವಣೆಯ ಹಿಂಟ್ ಕೊಟ್ಟ ಮುಖ್ಯಮಂತ್ರಿ ಬೊಮ್ಮಾಯಿ ‘ನಾವು ರೈತರ ಸಾಲದ ಮಿತಿಯನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಜಾಗತಿಕವಾಗಿ ಇರುವ ಮೀನ್ ಕಾಸ್ಟ್ ಆಧಾರದ ಮೇಲೆ ಲಾಭ ನಷ್ಟಗಳ ಲೆಕ್ಕಾಚಾರ ಮಾಡಬೇಕು. ಇನ್ಪುಟ್ ಕಾಸ್ಟ್ ಮತ್ತು ಪ್ರಾಫಿಟ್ ಆಧರದ ಮೇಲೆ ರೈತ ಕೃಷಿ ಮಾಡಬೇಕು. ಅದಕ್ಕೆ ಬೇಕಾಗುವ ರೀತಿಯ ಮಾರುಕಟ್ಟೆಯನ್ನು ನಾವು ಸೃಷ್ಟಿಸಬೇಕು. ಈ ಬಾರಿ ಬಜೆಟ್ನಲ್ಲೊ ರೈತರ ಸಾಲದ ಮಿತಿಯನ್ನು ಹೆಚ್ಚಿಸಲು ಏನೇನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ನಾವು ತೆಗೆದುಕೊಳ್ಳುತ್ತೇವೆ.
ನಾಳೆ ರೈತ ಶಕ್ತಿ ಯೋಜನೆಯಲ್ಲಿ 500 ಕೋಟಿ ರೂ.ಯನ್ನು ರೈತರ ಖಾತೆಗೆ ಮಿಷನರಿ ಮತ್ತು ಡಿಸೇಲ್ ಕಾಸ್ಟ್ ಅನ್ನು ಹಾಕುವ ಯೋಜನೆಗೆ ಚಾಲನೆ ನೀಡಲಿದ್ದೇವೆ. ಅದೇ ರೀತಿ ಎಸ್ಎಂ ಕೃಷ್ಣರ ‘ಯಶಸ್ವೀ’ ಯೋಜನೆಯನ್ನು ವಾಪಸ್ ಜಾರಿಗೆ ತಂದು ಯಾವ ರೈತರೂ ಅನಾರೋಗ್ಯದಿಂದ ಬಳಲುವುದನ್ನು ತಪ್ಪಿಸಲಿದ್ದೇವೆ. ರೈತರ ಪರವಾಗಿ ಹಲವಾರು ಕಾರ್ಯಕ್ರಮಗಳನ್ನು ನಾವು ಮಾಡಲಿದ್ದೇವೆ. ಕಾಲಕ್ಕೆ ತಕ್ಕ ಹಾಗೆ ರೈತರು ಹಾಗೂ ಸರ್ಕಾರ ಮುನ್ನುಗ್ಗಬೇಕು. ಆಗಲೇ ಅಭಿವೃದ್ಧಿ ಸಾಧ್ಯ’ ಎಂದರು.