ಬೆಂಗಳೂರು: ಲಾಕ್ಡೌನ್ ಉಲ್ಲಂಘಿಸುವ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದುವರೆಗೆ 17,500 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಲಾಕ್ಡೌನ್ ಉಲ್ಲಂಘಿಸಿ ಅನಗತ್ಯವಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದ 16,187ಕ್ಕೂ ಅಧಿಕ ದ್ವಿಚಕ್ರ ವಾಹನ, 554ಕ್ಕೂ ಅಧಿಕ ಆಟೋ, 646ಕ್ಕೂ ಹೆಚ್ಚಿನ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಎಲ್ಲ ಭಾಗಗಳಲ್ಲೂ ವಾಹನ ತಪಾಸಣೆ ಬಿಗಿಗೊಳಿಸಲಾಗಿದೆ. ಅನಗತ್ಯ ವಾಹನ ಸಂಚಾರ ತಡೆಯಲು ಹಲವು ರಸ್ತೆಗಳಲ್ಲಿ ಬ್ಯಾರಿಕೇಡ್ ಅಡ್ಡ ಹಾಕಲಾಗಿದೆ. ಅಗತ್ಯ ವಸ್ತುಗಳಿಗೆ ವಾಹನದಲ್ಲಿ ಸಂಚರಿಸುವವರನ್ನು ಹೊರತುಪಡಿಸಿ ಸುಮ್ಮನೆ ರಸ್ತೆಯಲ್ಲಿ ಸಂಚರಿಸುವವರ ವಾಹನವನ್ನು ಪೊಲೀಸರು ಜಪ್ತಿ ಮಾಡುತ್ತಿದ್ದಾರೆ.
ಕ್ರಿಮಿನಲ್ ಪ್ರಕರಣ: ಲಾಕ್ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ. ಅಗತ್ಯ ಸೇವೆಗಳಿಗೆ ಪಾಸ್ ಪಡೆದಿರುವವರು, ವೈದ್ಯಕೀಯ, ಅರೆವೈದ್ಯಕೀಯ ಸೇರಿ ಎಲ್ಲರೂ ಕಡ್ಡಾಯವಾಗಿ ಪೊಲೀಸರಿಗೆ ತಮ್ಮ ಗುರುತಿನ ಕಾರ್ಡ್ ತೋರಿಸಬೇಕು. ಪಾಸ್ ಇಲ್ಲದೆ ಓಡಾಡುವವರ ವಾಹನ ಜಪ್ತಿ ಮಾಡಲಾಗುವುದು. ನಕಲಿ ಪಾಸ್ ಇಟ್ಟುಕೊಂಡು ಓಡಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ನಕಲಿ ಪಾಸ್ ತಯಾರಿಸುವುದು ಅಥವಾ ಬಳಸಿ ಓಡಾಡುವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಸಿದ್ದಾರೆ.
ಪ್ರಾರ್ಥನೆಗೆ ಚರ್ಚ್, ಮಸೀದಿಗಳಿಗೆ ತೆರಳದಂತೆ ಸೂಚಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದಕೊಳ್ಳ ಬೇಕಾಗಿರುವುದರಿಂದ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕಲ್ಪಿಸುತ್ತಿಲ್ಲ. ನಿಯಮ ಉಲ್ಲಂಘಿಸಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು.
| ಭಾಸ್ಕರ್ ರಾವ್ ನಗರ ಪೊಲೀಸ್ ಆಯುಕ್ತ
ಮನೆಯಿಂದ ಹೊರಗೆ ಕಾಲಿಟ್ರೆ ಸಿಕ್ಕಿಬೀಳೋದು ಗ್ಯಾರೆಂಟಿ: ಕಮಿಷನರ್ ಭಾಸ್ಕರ್ ರಾವ್ ನೋಡ್ತಿದ್ದಾರೆ ಹುಷಾರ್!