ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಕಳೆದೊಂದು ವಾರದಿಂದ ಬುರ್ಜ್ ಖಲೀಫಾ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆ ಚರ್ಚೆಗೆ ಕಾರಣವಾಗಿದ್ದು, ‘ಕಿಚ್ಚ’ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ. ಭಾರತೀಯ ಸಿನಿಮಾರಂಗದಲ್ಲಿ ಮೊದಲ ಬಾರಿಗೆ ಇಂಥದ್ದೊಂದು ಗೌರವ ಸಿಕ್ಕಿದ್ದು ರಜನಿಕಾಂತ್ ಅವರಿಗೆ. ಅದಾದ ಬಳಿಕ ಇದೀಗ ಎರಡನೇ ವ್ಯಕ್ತಿಯಾಗಿ ಕನ್ನಡದ ಕಿಚ್ಚನಿಗೆ ಲಭಿಸಿದೆ. ನಾಡಿನ ಕೀರ್ತಿ ಪತಾಕೆಯನ್ನು ದೂರದ ದುಬೈನಲ್ಲಿ ಹಾರಿಸಿ, ಕನ್ನಡ ಚಿತ್ರರಂಗವನ್ನೂ ಮತ್ತೊಂದು ಹಂತಕ್ಕೆ ಸುದೀಪ್ ಕೊಂಡೊಯ್ದಿದ್ದಾರೆ. ಈ ವೇಳೆ ಹಲವು ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಕಲಾವಿದರು ದುಬೈನಲ್ಲಿಯೇ ಬೀಡು ಬಿಟ್ಟಿದ್ದರು ಎಂಬುದು ಮತ್ತೊಂದು ವಿಶೇಷ.
ಸದ್ಯ ಬುರ್ಜ್ ಖಲೀಫಾ ಸೇರಿ ದುಬೈನ ಹಲವೆಡೆ ಶಾರುಖ್ ಖಾನ್ ಮತ್ತು ಜಾನ್ ಅಬ್ರಾಹಂ ಅವರ ‘ಪಠಾಣ್ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡುತ್ತಿದ್ದಾರೆ. ಮೈನವಿರೇಳಿಸುವ ಸಾಹಸ ದೃಶ್ಯದ ಚಿತ್ರೀಕರಣವನ್ನು ಬುರ್ಜ್ ಆಸುಪಾಸಿನಲ್ಲಿ ಚಿತ್ರತಂಡ ಚಿತ್ರೀಕರಿಸಿಕೊಳ್ಳುತ್ತಿದೆ.
ಅದೇ ರೀತಿ ಹಾಲಿವುಡ್ನ ಸ್ಟಾರ್ ಹೀರೋ ಟಾಮ್ ಕ್ರೂಸ್ ಸಹ ದುಬೈನಲ್ಲಿ ಬೀಡು ಬಿಟ್ಟಿದ್ದಾರೆ. ‘ಮಿಷನ್ ಇಂಪಾಸಿಬಲ್’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಇದೆಲ್ಲದರ ನಡುವೆ ಟಾಲಿವುಡ್ ನಟ ಮಹೇಶ್ ಬಾಬು ಸಹ ‘ಸರ್ಕಾರು ವಾರಿ ಪಾಟ’ ಚಿತ್ರೀಕರಣದ ಸಲುವಾಗಿ ದುಬೈನಲ್ಲಿದ್ದಾರಂತೆ. ಇವರೆಲ್ಲ ಸಿನಿಮಾ ಶೂಟಿಂಗ್ನಲ್ಲಿ ಬಿಜಿಯಾಗಿದ್ದರೆ, ಇತ್ತ ಕಿಚ್ಚ ಸುದೀಪ್, ತಮ್ಮ 25ನೇ ವರ್ಷದ ಸಿನಿಮಾ ಯಾನವನ್ನು ‘ವಿಕ್ರಾಂತ್ ರೋಣ’ ಚಿತ್ರದ ಶೀರ್ಷಿಕೆ ಲೋಗೋ ಅನಾವರಣ ಮಾಡಿಕೊಂಡು 2000 ಅಡಿಯ ಬುರ್ಜ್ ಖಲೀಫಾ ಮೇಲೆ ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ. ಅವರ ಈ ಅವಿಸ್ಮರಣೀಯ ದಿನಕ್ಕೆ ಇಡೀ ಭಾರತೀಯ ಚಿತ್ರರಂಗದ ಗಣ್ಯರು ಶುಭಾಶಯ ಕೋರಿದ್ದಾರೆ.