ಚಿತ್ರದುರ್ಗ: ನಮ್ಮನ್ನೂ ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿ ಎಂದು ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಕೂಟ ನೇತೃತ್ವದಲ್ಲಿ ಸಾರಿಗೆ ಸಿಬ್ಬಂದಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಯೂನಿಯನ್ ಪಾರ್ಕ್ನಿಂದ ಡಿಸಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ಸಂಖ್ಯೆಯ ಸಿಬ್ಬಂದಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಎಡಿಸಿ ಸಿ.ಸಂಗಪ್ಪ ಅವರಿಗೆ ಮನವಿ ಸಲ್ಲಿಸಿದರು.
ಜೀವದ ಹಂಗು ತೊರೆದು ಹಗಲು, ರಾತ್ರಿ ಪ್ರಯಾಣಿಕರ ಸುರಕ್ಷತೆಗಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ, ಮೂರು ವರ್ಷದಿಂದ ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ಆಗ್ರಹಿಸುತ್ತಿದ್ದರು ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಎಲ್ಲ ಸಾರಿಗೆ ನಿಗಮಗಳ ಮೇಲೆ ಸರ್ಕಾರದ ಹತೋಟಿ ನೇರ ಇದೆ. ವರ್ಗಾವಣೆ, ಬಸ್ ಖರೀದಿ, ವೇತನ, ಪ್ರಯಾಣ ದರ,ಪಾಸ್ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರದ ಅನುಮತಿ ಪಡೆದೆ ನಿರ್ಧಾರ ಕೈಗೊಳ್ಳ ಬೇಕಿದೆ. ಆದರೆ, ನಮ್ಮನ್ನು ಮಾತ್ರ ಸರ್ಕಾರಿ ನೌಕರರು ಎಂದು ಪರಿಗಣಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ವಿವಿಧ ಇಲಾಖೆಗಳ ನೌಕರರಿಗೆ ಸಿಗುವ ಸೇವಾ ಸವಲತ್ತುಗಳಿಂದ ನಾವು ವಂಚಿತರಾಗಿದ್ದೇವೆ. ಈ ಬಾರಿ ಬಜೆಟ್ನಲ್ಲಾದರೂ ನಮ್ಮ ಬೇಡಿಕೆ ಮನ್ನಿಸಲು ಮುಖ್ಯಮಂತ್ರಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಕೆ.ಪಿ.ಭೂತಯ್ಯ ಮಾತನಾಡಿ, ಸಿಬ್ಬಂದಿ ಪ್ರಾಮಾಣಿಕವಾಗಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಇವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಆದ್ಯ ಕರ್ತವ್ಯ ಆಗಬೇಕು. ಸರ್ಕಾರಿ ನೌಕರರೆಂದು ಪರಿಗಣಿಸಿ ಮುಖ್ಯಮಂತ್ರಿ ಕೂಡಲೇ ಆದೇಶಿಸ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಕೂಟದ ಪದಾಧಿಕಾರಿಗಳಾದ ಆರ್.ಬಾಬುರಾಜ್, ರಾಜಣ್ಣ, ಚಂಪಕಾವತಿ, ಮಮತಾ, ಲಕ್ಷ್ಮಿ, ಆರ್.ಶಿವಕುಮಾರ್, ಎನ್.ಸತೀಶ್, ದೇವರಾಜ್, ಎಸ್.ನಟರಾಜ್, ಆರ್.ಚಂದ್ರಶೇಖರ್, ರಮಾ ನಾಗರಾಜ್, ಬದ್ರಿನಾಥ್, ಶಂಕರಪ್ಪ, ಸುರೇಶ್ಬಾಬು ಬಸ್ತಿಹಳ್ಳಿ ಸೇರಿ ನಾನಾ ಸಂಘಟನೆ ಪ್ರಮುಖರು ಪಾಲ್ಗೊಂಡಿದ್ದರು.
ಯೂನಿಯನ್ ಪಾರ್ಕ್ ಬಳಿ ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮೆರವಣಿಗೆಗೆ ಚಾಲನೆ ನೀಡಿದರು.