ಚಿತ್ರದುರ್ಗ: ಒವರ್ಲೋಡ್ನೊಂದಿಗೆ ಕಬ್ಬಿಣದ ಅದಿರು ಸಾಗಿಸುತ್ತಿದ್ದ ಎರಡು ಲಾರಿ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸದೇ, ಕರ್ತವ್ಯ ಲೋಪ ಎಸಗಿದ ಆರೋಪದಡಿ ಪಿಎಸ್ಐ ಹಾಗೂ ಮೂವರು ಪೊಲೀಸರನ್ನು ಎಸ್ಪಿ ಜಿ.ರಾಧಿಕಾ ಶುಕ್ರವಾರ ಅಮಾನತು ಮಾಡಿದ್ದಾರೆ.
ಹೊಸಪೇಟೆಯಿಂದ ಶಿರಾಕ್ಕೆ ತೆರಳುತ್ತಿದ್ದ ಲಾರಿಗಳನ್ನು ಗುರುವಾರ ತಡೆದು ತನಿಖೆ ನಡೆಸಿದ್ದ ತುರುವನೂರು ಪೊಲೀಸರು, ಕಾನೂನು ಕ್ರಮ ಜರುಗಿಸದೆ ಹಾಗೆ ಬಿಟ್ಟು ಕಳಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಐ ಯಶೋಧಮ್ಮ, ಎಎಸ್ಐ ಸುದರ್ಶನ್, ಸಿಬ್ಬಂದಿ ಮಂಜುನಾಥ್ ಹಾಗೂ ಚಾಲಕ ನಾಗರಾಜ್ ಇವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
40 ಟನ್ ಸಾಮರ್ಥ್ಯದ ಲಾರಿಯಲ್ಲಿ ಹೆಚ್ಚುವರಿಯಾಗಿ 16 ಟನ್ ಅದಿರು ಸಾಗಿಸಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ದಂಡ ವಿಧಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಶಿಫಾರಸು ಮಾಡಿರುವುದಾಗಿ ಪ್ರಕರಣ ದಾಖಲಿಸಿರುವ ಗ್ರಾಮಾಂತರ ಸಿಪಿಐ ಬಿ.ವಿ.ಗಿರೀಶ್ ತಿಳಿಸಿದ್ದಾರೆ.