ಚಿತ್ರದುರ್ಗ: ಅಸ್ಪಶ್ಯರಲ್ಲದ ಭೋವಿ, ಲಂಬಾಣಿ, ಕೊರಚ, ಕೊರಮ (ಕೊಲಂಭೋ) ಸಮುದಾಯಗಳನ್ನು ಮೀಸಲು ಪಟ್ಟಿಯಿಂದ ಕೈಬಿಡಬೇಕೆಂದು ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ತಪ್ಪಾಗಿ ಅರ್ಥೈಸಲಾಗುತ್ತಿದ್ದು, ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಸ್ಪಷ್ಟನೆ ಕೊಡಬೇಕು ಎಂದು ಭೋವಿ ಮಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಒತ್ತಾಯಿಸಿದರು.
ಪತ್ರ ಚಳವಳಿಗೆ ನಗರದ ಪ್ರಧಾನ ಅಂಚೆ ಕಚೇರಿ ಬಳಿ ಬುಧವಾರ ಚಾಲನೆ ನೀಡಿ ಮಾತನಾಡಿ, ಈ ಸಮುದಾಯಗಳನ್ನು ಮೀಸಲು ಪಟ್ಟಿಯಿಂದ ಕೈ ಬಿಡಬಾರದೆಂದು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಸವಲತ್ತು ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಅಂಬೇಡ್ಕರ್ ಮೀಸಲು ಸೌಲಭ್ಯವನ್ನು ಸಂವಿಧಾನ ಬದ್ಧ ಹಕ್ಕನ್ನಾಗಿ ನೀಡುವ ಮೂಲಕ ಈ ಸಮುದಾಯಗಳ ಸಹಿತ 101 ಜಾತಿ ಜನರಿಗೆ ಸಮಾನವಾಗಿ ಬದುಕುವ ಅವಕಾಶ ಮಾಡಿಕೊಟ್ಟಿದ್ದಾರೆ.
ಕೊಲಂಭೋ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆದು ಹಾಕಬೇಕೆಂದು ಕೋರ್ಟ್ ಆದೇಶಿಸಿದೆ ಎಂಬರ್ಥದಲ್ಲಿ ಅಪಪ್ರಚಾರ ನಡೆಯುತ್ತಿದೆ. ಸಂವಿಧಾನ ಮತ್ತು ಕೋರ್ಟ್ ಮಾರ್ಗಸೂಚಿಯನ್ನು ತಪ್ಪಾಗಿ ಅರ್ಥೈಸುವ ಮೂಲಕ ಕೆಲವರು, ಬಡವರ್ಗಗಳಿಗೆ ಇರುವ ಮೀಸಲು ವ್ಯವಸ್ಥೆಯ ಬುಡಮೇಲಿಗೆ ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.
ಜಿಪಂ ಮಾಜಿ ಉಪಾಧ್ಯಕ್ಷ ಅನಿಲ್ ಕುಮಾರ್, ನರೇನಹಳ್ಳಿ ಅರುಣ್ ಕುಮಾರ್, ಎಚ್.ಕನಕದಾಸ್, ಎಚ್.ಲಕ್ಷ್ಮಣ್, ಚಿಕ್ಕಂದವಾಡಿ ತಿಪ್ಪೇಸ್ವಾಮಿ,ಇ.ಮಂಜುನಾಥ, ವೆಂಕಟೇಶ್, ಗಂಗಾಧರ, ಗೌನಳ್ಳಿ ಗೋವಿಂದಪ್ಪ, ಗಣೇಶನಾಯ್ಕ, ಎಚ್.ಆಂಜನೇಯ, ಅಂಜಿನಪ್ಪ, ಅನಿಲ್ ಮತ್ತಿತರು ಇದ್ದರು.