ಚಿತ್ರದುರ್ಗ; ವಿಶ್ವಕ್ಕೆ ದಿಕ್ಕು ತೋರಿಸುವ ಭಾರತವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಶಕ್ತಿ ವಿದ್ಯಾರ್ಥಿಗಳಿಗೆ ಇದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.
ದೊಡ್ಡಬಳ್ಳಾಪುರದಲ್ಲಿ ಡಿ.27ರಿಂದ 7 ದಿನದ ನಡೆದಿದ್ದ 28ನೇ ರಾಜ್ಯಜಾಂಬೊರೇಟ್ನಲ್ಲಿ ಎ ಶ್ರೇಣಿಗೆ ಭಾಜನವಾದ ಜಿಲ್ಲಾ ತಂಡಕ್ಕೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ತರಾಸು ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಅಭಿನಂದನೆ ಹಾಗೂ ಪ್ರಶಸ್ತಿಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶ್ರೀಮಂತರು, ಜನಪ್ರತಿನಿಧಿಗಳು, ಅಧಿಕಾರಿಗಳಿಂದ ದೇಶ ಬಲಿಷ್ಠವಾಗದು. ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳುವ ಮೂಲಕ ದೇಶ ಮುನ್ನಡೆಸ ಬೇಕಿದ್ದು, ಇದಕ್ಕಾಗಿ ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿಯ ಅಗತ್ಯವಿದೆ ಎಂದರು.
ನಾನು 5ನೇ ತರಗತಿಯಿಂದ ಸ್ಕೌಟ್ಸ್ ತರಬೇತಿ ಪಡೆದಿದ್ದೇನೆ. ಜಾತಿ, ಮತ ಭೇದವಿಲ್ಲದೆ ಎಲ್ಲರನ್ನು ಒಂದೇ ತಾಯಿ ಮಕ್ಕಳೆನ್ನುವ ಮನೋಭಾವ ಕಲಿಸುತ್ತದೆ. ಸೆಲ್ಫಿ ತೆಗೆದುಕೊಳ್ಳುವ ಈ ಕಾಲದಲ್ಲಿ ಎಲ್ಲರೂ ಸೆಲ್ಫಿಶ್ಗಳಾಗುತ್ತಿದ್ದಾರೆ ಎಂದು ಬೇಸರಿಸಿದರು.
ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳಲ್ಲೇ ಚಿತ್ರದುರ್ಗ, ಜಾಂಬೊರೇಟ್ನಲ್ಲಿ ಇದೇ ಮೊದಲ ಬಾರಿಗೆ ಎ ಶ್ರೇಣಿ ಪಡೆದಿದೆ. ಈ ಗೌರವಕ್ಕೆ ಪಾತ್ರರಾದ ಕೆಲವೇ ಜಿಲ್ಲೆಗಳಲ್ಲಿ ನಮ್ಮ ಜಿಲ್ಲೆಯೂ ಒಂದು ಎಂದರು.
ಸಂಸ್ಥೆ ಕಾರ್ಯದರ್ಶಿ ಪಿ.ವೈ.ದೇವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಲ ಶಿಬಿರಾರ್ಥಿಗಳು ಅನಿಸಿಕೆ ಹಂಚಿಕೊಂಡರು.
ಜಿಲ್ಲಾ ಸಂಸ್ಥೆ ಹಿರಿಯ ಉಪಾಧ್ಯಕ್ಷ ನಾರಾಯಣಪ್ಪ ಅಧ್ಯಕ್ಷತೆ ವಹಿಸಿದ್ದರು. ಎಂಎಲ್ಸಿ ಜಯಮ್ಮ ಬಾಲರಾಜ್, ಡಿಡಿಪಿಐ ಕೆ.ರವಿಶಂಕರ ರೆಡ್ಡಿ, ಗೈಡ್ಸ್ ಜಿಲ್ಲಾ ಆಯುಕ್ತೆ ಸುನಿತಾ ಮಲ್ಲಿಕಾರ್ಜುನ್, ಎಂ.ಕೆ.ತಾಜ್ಪೀರ್, ಡಾ.ರಹಮತ್ ವುಲ್ಲಾ, ಅನ್ವರ್ಪಾಷ, ಜಿ.ಎಸ್.ಉಜ್ಜಿನಪ್ಪ, ವಿ.ಎಲ್.ಪ್ರಶಾಂತ್, ನಿರ್ಮಲಾ ಬಸವರಾಜ್, ಓಂಕಾರಪ್ಪ, ಪರಮೇಶ್ ಮತ್ತಿತರರಿದ್ದರು.