ಚಿತ್ರದುರ್ಗ: ನಗರದ ಭಾವಸಾರ ಕ್ಷತ್ರಿಯ ಸಮಾಜ ಹಾಗೂ ದುರ್ಗಾದೇವಿ ದೇವಾಲಯ ಸಮಿತಿಯಿಂದ ಶ್ರೀ ದುರ್ಗಾದೇವಿ 80 ನೇ ವರ್ಷದ ಹೊರಬೀಡು ಜಾತ್ರಾ ಮಹೋತ್ಸವ ನಗರದ ಚಂದ್ರವಳ್ಳಿ ತೋಟದಲ್ಲಿ ಮಂಗಳವಾರ ಶ್ರದ್ಧಾಭಕ್ತಿಗಳೊಂದಿಗೆ ನಡೆಯಿತು.
ಉತ್ಸವದ ಅಂಗವಾಗಿ ಭಾವಸಾರ ಕ್ಷತ್ರಿಯ ಸಮಾಜ ಶ್ರೀ ದೇವಿ ಉತ್ಸವ ಮೂರ್ತಿಯನ್ನು ನಗರದ ಗೋಪಾಲಪುರ ರಸ್ತೆ ದರ್ಜಿ ಕಾಲನಿಯಿಂದ ಚಂದ್ರವಳ್ಳಿಯವರೆಗೆ ಮೆರವಣಿಗೆಯೊಂದಿಗೆ ಕರೆತರಲಾಯಿತು. ಅಲ್ಲಿ ಹೂವಿನ ವಿಶೇಷ ಅಲಂಕಾರದೊಂದಿಗೆ ದೇವಿಗೆ ವಿಶೇಷ ಸಹಿತ ನಾನಾ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ನೂತನ ವರ್ಷದಲ್ಲಿ ನಾಡಿನಾದ್ಯಂತ ಸಮೃದ್ಧ ಮಳೆ, ಬೆಳೆಯಾಗಿ ನೆಮ್ಮದಿ ತರಲಿ ಎಂದು ಪ್ರಾರ್ಥಿಸಲಾಯಿತು. ಚಿತ್ರದುರ್ಗ ಜಿಲ್ಲೆ ಹಾಗೂ ನೆರೆಹೊರೆ ಜಿಲ್ಲೆಯ ಸಾವಿರಾರು ಭಕ್ತರು ಸಾಮೂಹಿಕವಾಗಿ ಪ್ರಸಾದ ಸ್ವೀಕರಿಸಿದರು.