ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿರುವ ಹೋಟೆಲ್, ಲಾಡ್ಜ್ಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ.
ಒಂದೇ ಬಾರಿ ಐದಕ್ಕಿಂತ ಹೆಚ್ಚು ಕೋಣೆಗಳನ್ನು ಕಾಯ್ದಿರಿಸುವುದು, ಐವತ್ತಕ್ಕಿಂತ ಹೆಚ್ಚು ಮಂದಿಗೆ ಊಟದ ವ್ಯವಸ್ಥೆ ಮಾಡಿದರೆ ಚುನಾವಣಾ ಅಧಿಕಾರಿಗಳ ಗಮನಕ್ಕೆ ತರಬೇಕು.
ಇದರೊಂದಿಗೆ ಹೋಟೆಲ್ ಮತ್ತು ಲಾಡ್ಜ್ಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಸದಾ ಸುಸ್ಥಿತಿಯಲ್ಲಿಟ್ಟು ಕಣ್ಗಾವಲು ಇಟ್ಟಿರಬೇಕು ಎಂದು ಹೋಟೆಲ್ ಮಾಲೀಕರಿಗೆ ಸೂಚನೆ ನೀಡಲಾಗಿದೆ.
ಈ ಸಂಬಂಧ ಹೋಟೆಲ್ ಮಾಲೀಕರ ಸಂಘದ ಸದಸ್ಯರೊಂದಿಗೆ ಅಧಿಕಾರಿಗಳು ಸಭೆ ನಡೆಸಿ, ಹೋಟೆಲ್ ಮತ್ತು ಲಾಡ್ಜ್ಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿ ಅಕ್ರಮ ನಡೆದರೆ ಅದಕ್ಕೆ ಹೋಟೆಲ್ ಮತ್ತು ಲಾಡ್ಜ್ನ ಮುಖ್ಯಸ್ಥರೊಂದಿಗೆ ಸಿಬ್ಬಂದಿ ಹೊಣೆ ಎನ್ನುವ ಎಚ್ಚರಿಕೆ ನೀಡಿದ್ದಾರೆ.
ಹೋಟೆಲ್ಗಳಲ್ಲಿ ಯಾವುದೇ ಸಭೆ ನಡೆದರೂ ಹೋಟೆಲ್ನ ಸಿಬ್ಬಂದಿ, ಅದಕ್ಕೆ ಚುನಾವಣಾ ಆಯೋಗದಿಂದ ಅನುಮತಿ ಪಡೆಯಲಾಗಿದೆಯೇ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಬೇಕು.
ಹಣ ಅಥವಾ ಊಡುಗೊರೆ ಹಂಚಿಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಪ್ರತಿಯೊಂದಕ್ಕೂ ಲೆಕ್ಕವನ್ನು ನೀಡಬೇಕು. ಅಕ್ರಮದ ಬಗ್ಗೆ ಮಾಹಿತಿ ನೀಡದೇ ಇದ್ದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ಈ ಸಂಬಂಧ ಎಲ್ಲ ಹೋಟೆಲ್ ಮಾಲೀಕರ ಸಂಘದ ಸದಸ್ಯರು ನೀತಿಸಂಹಿತೆ ಪಾಲಿಸುವ ಜೊತೆಗೆ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಾಗಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದ್ದಾರೆ.