ಚಿಕ್ಕಮಗಳೂರು: ಜಿಲ್ಲೆಯಲ್ಲಿ ರ್ಯಾಪಿಡ್ ಟೆಸ್ಟಿಂಗ್ ಕಿಟ್ಗಳ ಮೂಲಕ ಪರೀಕ್ಷೆ ನಡೆಸುತ್ತಿರುವುದರಿಂದ ವರದಿ ಬೇಗ ಲಭ್ಯವಾಗುತ್ತಿರುವುದರಿಂದ ಹೆಚ್ಚಿನ ಸೋಂಕಿತರು ಪತ್ತೆಯಾಗುತ್ತಿದ್ದಾರೆ ಎಂದು ಜಿಲ್ಲಾ ಸರ್ಜನ್ ಡಾ. ಮೋಹನ್ಕುಮಾರ್ ಹೇಳಿದರು.
ಜಿಲ್ಲೆಗೆ 2 ಸಾವಿರ ರ್ಯಾಪಿಡ್ ಟೆಸ್ಟಿಂಗ್ ಕಿಟ್ಗಳು ಪೂರೈಕೆ ಮಾಡಲಾಗಿದೆ. ಇವುಗಳ ಮೂಲಕ ಕರೊನಾ ಪರೀಕ್ಷೆ ನಡೆಸುತ್ತಿರುವುದರಿಂದ ಪ್ರತಿದಿನ ಹೆಚ್ಚಿನ ಸೋಂಕಿತರು ಪತ್ತೆಯಾಗುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ನಾವು ಅತ್ಯಂತ ಮುಖ್ಯಘಟ್ಟದಲ್ಲಿದ್ದು ಬೆಂಗಳೂರಿನಲ್ಲಿ ಸೋಂಕು ತೀವ್ರವಾಗಿರುವಂತೆ ಜಿಲ್ಲೆಯಲ್ಲೂ ಸೋಂಕು ಸಮುದಾಯಕ್ಕೆ ಹರಡುವ ಮುನ್ನ ಎಚ್ಚರಿಕೆ ವಹಿಸಬೇಕಿರುವುದರಿಂದ ಜನರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಕ್ಕರೆ ಕಾಯಿಲೆ ಇರುವವರಲ್ಲಿ ಕರೊನಾ ಹೆಚ್ಚಿನ ಸಮಸ್ಯೆ ಉಂಟು ಮಾಡುತ್ತಿರುವುದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರದಲ್ಲಿ ಇರಿಸಿಕೊಳ್ಳುವುದು ಅಗತ್ಯ ಎಂದು ಸಲಹೆ ನೀಡಿದರು.
ಕರೊನಾ ಪ್ರಯೋಗಾಲಯ ಆರಂಭಕ್ಕೆ ಹಗಲು ರಾತ್ರಿ ಶ್ರಮಿಸಲಾಗುತ್ತಿದೆ. ಸಿವಿಲ್ ಕಾಮಗಾರಿಗಳು ಮುಗಿದಿದ್ದು, ಗ್ಲಾಸ್ ಪಾರ್ಟಿಷನ್ ಕೆಲಸ ಬಾಕಿ ಇದ್ದು ಅದನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದರು.
ಜಿಲ್ಲಾ ಆಸ್ಪತ್ರೆಗೆ ಬರುವ ಸಾಮಾನ್ಯ ರೋಗಿಗಳನ್ನು ಅಲ್ಲಿನ ವೈದ್ಯರು ಮುಟ್ಟಿ ನೋಡದೆ ಹಾಗೆ ಚೀಟಿ ಬರೆದು ಕೊಡುತ್ತಾರೆ ಎನ್ನುವ ಆರೋಪಗಳಿವೆ. ಕೆಮ್ಮು, ಶೀತ, ಉಸಿರಾಟದ ತೊಂದರೆ ಇರುವವರನ್ನು ಮುಟ್ಟಿ ನೋಡುವುದಕ್ಕಿಂತ ಆಮ್ಲಜನಕದ ಪ್ರಮಾಣ ಗುರುತಿಸಿ, ಎಕ್ಸರೇ, ಸಿಟಿ ಸ್ಕ್ಯಾನ್ ನೋಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಆರೋಪಗಳಲ್ಲಿ ಹುರುಳಿಲ್ಲ ಎಂದರು.