ಜೈಪುರ : ಲಾಕ್ಡೌನ್ ಸಮಯದಲ್ಲಿ ಮದ್ಯ ಮತ್ತು ಆಹಾರ ಪದಾರ್ಥಗಳನ್ನು ಮನೆಗೇ ತಲುಪಿಸುವುದಾಗಿ ನಂಬರ್ ನೀಡಿ, ಆನ್ಲೈನ್ ಹಣ ವರ್ಗಾಯಿಸಿಕೊಂಡು 100 ಕ್ಕೂ ಹೆಚ್ಚು ಜನರನ್ನು ವಂಚಿಸಿದ್ದ ಇಬ್ಬರು ಖದೀಮರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ಭರತಪುರ ಜಿಲ್ಲೆಯ ನಿವಾಸಿಗಳಾದ ತಾರೀಫ್ ಖಾನ್(24) ಮತ್ತು ತೌಫೀಕ್(22) ಬಂಧಿತ ಆರೋಪಿಗಳು.
ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ವ್ಯಕ್ತಿಯು, ಜನಪ್ರಿಯ ಸ್ವೀಟ್ ಶಾಪಿನಿಂದ ಫುಡ್ ಪ್ಯಾಕೆಟ್ಗಳ ಡೆಲಿವರಿ ಮಾಡುವುದಾಗಿ ಇಂಟರ್ನೆಟ್ನಲ್ಲಿ ಹಾಕಿದ್ದ ನಂಬರ್ಗೆ ಫೋನ್ ಮಾಡಿದ್ದರು. ಆಗ ಆರೋಪಿಗಳು, ಅಂಗಡಿಯ ಸಿಬ್ಬಂದಿ ಎಂದು ಹೇಳಿಕೊಂಡು ಮುಂಗಡ ಹಣ ವರ್ಗಾಯಿಸಲು ಬಾರ್ಕೋಡ್ ಸ್ಕ್ಯಾನ್ ಮಾಡಿ ಎಂದು ಹೇಳಿದರು. ಹಾಗೆ ಮಾಡಿದಾಗ ನಾಲ್ಕು ಪ್ರತ್ಯೇಕ ವ್ಯವಹಾರಗಳು ನಡೆದು ದೂರುದಾರರ ಖಾತೆಯಿಂದ 82,500 ರೂಪಾಯಿಗಳು ಕಡಿತಗೊಂಡಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ಮೀರಾಬಾಯಿ ಚಾನು ಚಿಕಿತ್ಸೆ, ತರಬೇತಿಗೆ ಮೋದಿ ನೆರವು!
ವಿಚಾರಣೆ ನಡೆಸಿದಾಗ ಆರೋಪಿಗಳು ಹರಿಯಾಣದ ಮೇವಾತ್ನ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದರು. ಒಡಿಶಾ, ಹರಿಯಾಣ, ರಾಜಸ್ತಾನ ಮತ್ತು ತೆಲಂಗಾಣ ರಾಜ್ಯಗಳಲ್ಲಿಂದ ನಕಲಿ ಮೊಬೈಲ್ ನಂಬರ್ಗಳನ್ನು ಬಳಸುತ್ತಿದ್ದರು ಎಂಬುದು ತಿಳಿದುಬಂತು. ಈ ಮೊಬೈಲ್ ನಂಬರ್ಗಳನ್ನು ಟ್ಯಾಪ್ ಮಾಡಿ, ತನಿಖೆ ಕೈಗೊಂಡ ನಂತರ ಆರೋಪಿಗಳನ್ನು ಉತ್ತರ ಪ್ರದೇಶದ ಆಗ್ರಾದಲ್ಲಿ ಬಂಧಿಸಲಾಯಿತು. ಆರೋಪಿಗಳಿಂದ ನಾಲ್ಕು ಮೊಬೈಲ್ಗಳು, 28 ಸಿಮ್ ಕಾರ್ಡ್ಗಳು ಮತ್ತು 16,000 ರೂ. ನಗದು ಮತ್ತು ವಂಚನೆಯ ಹಣದಿಂದ ಖರೀದಿಸಿದ್ದ ಮಾರುತಿ ಬ್ರೀಜಾ ಕಾರನ್ನು ಜಪ್ತಿಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಆ್ಯಂಟೋ ಅಲ್ಫೊನ್ಸೆ ಹೇಳಿದ್ದಾರೆ. (ಏಜೆನ್ಸೀಸ್)
ಸರ್ವೋನ್ನತ ಕ್ರೀಡಾ ಪುರಸ್ಕಾರಕ್ಕೆ ಹಾಕಿ ದಿಗ್ಗಜ ಮೇಜರ್ ಧ್ಯಾನ್ಚಂದ್ ಹೆಸರು