ಮದ್ದೂರು: ತಾಲೂಕಿನ ಕೆಸ್ತೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದ ಚಿಕ್ಕಂಕನಹಳ್ಳಿ ಶ್ರೀ ನಂದಿಬಸವೇಶ್ವರ ದನಗಳ ಜಾತ್ರೆಯನ್ನು ದನಗಳಿಗೆ ಚರ್ಮಗಂಟು ರೋಗ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ರದ್ದು ಮಾಡಲಾಗಿದೆ ಎಂದು ತಾಲೂಕು ಪಶು ವೈದ್ಯಾಧಿಕಾರಿ ಡಾ.ಬಿ.ಬಿ.ಪ್ರವೀಣ್ಕುಮಾರ್ ತಿಳಿಸಿದರು.
ಜಾತ್ರೆಯನ್ನು ರದ್ದಾಗಿದ್ದರೂ ಕೆಲ ರೈತರು ದನಗಳ ಜಾತ್ರೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಸೋಮವಾರ ಸ್ಥಳಕ್ಕೆ ಆಗಮಿಸಿದ ಪ್ರವೀಣ್ಕುಮಾರ್, ರೈತರಿಗೆ ಜಾತ್ರೆ ನಡೆಸದಂತೆ ಮನವರಿಕೆ ಮಾಡಿಕೊಟ್ಟರು.
ಈಗಾಗಲೇ ತಾಲೂಕಿನ 167 ಗ್ರಾಮಗಳಲ್ಲಿ ಜಾನುವಾರಗಳಿಗೆ ಚರ್ಮಗಂಟು ರೋಗ ಕಂಡುಬಂದಿದ್ದು, 67 ರಾಸುಗಳು ಮರಣ ಹೊಂದಿವೆ. ಜಾನುವಾರುಗಳ ಆರೋಗ್ಯದ ದೃಷ್ಟಿಯಿಂದ ಜಾತ್ರೆ ರದ್ದುಪಡಿಸಲಾದ್ದು, ರೈತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಚರ್ಮಗಂಟು ರೋಗ ತಡೆಯುವ ಉದ್ದೇಶದಿಂದ ಮತ್ತು ಲಸಿಕೆ ಕಾರ್ಯಕ್ರಮ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟಲು ದನಗಳ ಸಂತೆ ಮತ್ತು ಜಾತ್ರೆ ನಿಷೇಧದ ಮಾಡಲಾಗಿದೆ ಎಂದು ತಿಳಿಸಿದರು. ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ ಹಾಗೂ ಅಧಿಕಾರಿಗಳು ಇದ್ದರು.