ಗುಂಡ್ಲುಪೇಟೆ: ಎದೆ ಹಾಲನುಣಿಸಿ, ಘರ್ಜಿಸುವುದ ಕಲಿಸಿ, ಆಹಾರ ಹುಡುಕುವುದು ಸೇರಿ ಬದುಕುವುದ ಹೇಳಿ ಕೊಡಬೇಕಾದ ತಾಯಿ ಬಿಟ್ಟು ಹೋದ ಮೂರು ಹುಲಿ ಮರಿಗಳಲ್ಲಿ ಎರಡು ಮೃತಪಟ್ಟಿವೆ. ಮತ್ತೊಂದರ ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಯಡಿಯಾಲ ಉಪವಿಭಾಗದ ವನ್ಯಜೀವಿ ವಲಯದಲ್ಲಿ ತಾಯಿ ಜತೆ ಇಲ್ಲದ 3 ಹುಲಿ ಮರಿಗಳನ್ನು (1 ತಿಂಗಳು) ಅರಣ್ಯ ಇಲಾಖೆ ಪತ್ತೆ ಹಚ್ಚಿದೆ.
ಅದರಲ್ಲಿ ಒಂದು ಹೆಣ್ಣು ಹುಲಿ ಮರಿ ಸ್ಥಳದಲ್ಲೇ ಮೃತಪಟ್ಟಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಉಳಿದ ಎರಡು ಹುಲಿ ಮರಿಗಳನ್ನು ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ರವಾನಿಸಲಾಗಿ ಅಲ್ಲಿ ಹೆಣ್ಣು ಹುಲಿ ಮರಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದೆ. ಉಳಿದಿರುವ ಒಂದು ಗಂಡು ಹುಲಿ ಮರಿಯ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ.
ಮಾ.28ರಂದು ಮಧ್ಯಾಹ್ನ ಸುಮಾರು 2 ಗಂಟೆ ಸಮಯದಲ್ಲಿ ಹುಲಿ ಮರಿಗಳು ಪತ್ತೆಯಾಗಿವೆ. ತಾಯಿ ಹುಲಿಗಳು ಮರಿಗಳೊಂದಿಗೆ ಸಾಮಾನ್ಯವಾಗಿ ಎರಡರಿಂದ ಮೂರು ವರ್ಷ ಜತೆ ಇರುತ್ತವೆ. ಎಲ್ಲೇ ಹೋದರು ತನ್ನ ಮರಿಗಳನ್ನು ಸಂರಕ್ಷಣೆ ಮಾಡುತ್ತ ಆಹಾರ ಹುಡುಕುವುದು, ಬೇಟೆಯಾಡುವುದು, ಬೇರೆ ಹುಲಿಗಳ ಆಕ್ರಮಣದಿಂದ ತಪ್ಪಿಸಿಕೊಳ್ಳುವ ಕಲೆಯನ್ನು ಕಲಿಸುತ್ತದೆ. ಆದರೆ ಯಡಿಯಾಲ ವಲಯದಲ್ಲಿ ಸಿಕ್ಕಿರುವ ಹುಲಿ ಮರಿಗಳು ತಾಯಿಯಿಂದ ಹೇಗೆ ಬೇರ್ಪಟ್ಟಿವೆ ಎನ್ನುವುದು ಇನ್ನು ತಿಳಿದುಬಂದಿಲ್ಲ.
ಹುಲಿ ಮರಿಗಳು ಸಿಕ್ಕ ಸ್ಥಳಕ್ಕೆ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನಿರ್ದೇಶಕ ನಟೇಶ್ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಭಾರತೀಯ ಹುಲಿ ಸಂರಕ್ಷಿತ ಅರಣ್ಯ ಪ್ರಾಧಿಕಾರದ ಮಾರ್ಗಸೂಚಿಯ ಪ್ರಕಾರ ಸಮಿತಿಯೊಂದನ್ನು ರಚಿಸಲಾಗಿದೆ.
ಸಮಿತಿಯ ನಿರ್ಧಾರದ ಪ್ರಕಾರ ಮೃತಪಟ್ಟ ಒಂದು ಹೆಣ್ಣುಹುಲಿ ಮರಿಯ ಶವಪರೀಕ್ಷೆಯನ್ನು ಸಮಿತಿಯ ಸದಸ್ಯರು ಮುಂದೆ ಶವ ಪರೀಕ್ಷೆ ನಡೆಸಲಾಯಿತು. ನಂತರ ಪಶು ವೈದ್ಯಾಧಿಕಾರಿಗಳ ಪ್ರಕಾರ ಹುಲಿಯು ಹಸಿವಿನಿಂದ ಮೃತಪಟ್ಟಿರಬಹುದೆಂದು ತಿಳಿಸಲಾಯಿತು.
ಉಳಿದ ಎರಡು ಮರಿಗಳನ್ನು ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಹೆಚ್ಚಿನ ಚಿಕಿತ್ಸೆ ಮತ್ತು ಆರೈಕೆಗಾಗಿ ಕಳಿಸಲಾಯಿತು ಚಿಕಿತ್ಸೆ ಫಲಕಾರಿಯಾಗದೆ ಒಂದು ಹೆಣ್ಣುಮಗಳಿಗೆ ಮೃತಪಟ್ಟಿದೆ.
ಉಳಿದ ಇನ್ನೊಂದು ಗಂಡು ಹುಲಿಮರಿ ಆರೋಗ್ಯದ ಬಗ್ಗೆ ಗಮನ ನೀಡಲಾಗಿದೆ. ಹುಲಿಮರಿಗಳು ಸಿಕ್ಕ ಸ್ಥಳ ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶವನ್ನು ಕೂಂಬಿಂಗ್ ಕಾರ್ಯಾಚರಣೆ ಮಾಡಲಾಗಿ ತಾಯಿ ಹೆಜ್ಜೆಗುರುತು ಹುಲಿಮರಿಗಳ ಜತೆ ಇರುವುದು ಕಂಡುಬಂದಿರುತ್ತದೆ. ಸ್ಥಳದಲ್ಲಿ ತಾಯಿ ಹುಲಿ ಪತ್ತೆಗಾಗಿ ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಇದಕ್ಕಾಗಿ ಕ್ಯಾಮರಾಗಳನ್ನು ಅಳವಡಿಸಿ ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಮದುವೆಗೆ ಹೊರಟಿದ್ದವರ ಮರಣ: ಭೀಕರ ಅಪಘಾತದಲ್ಲಿ ಬಾಲಕಿಯರಿಬ್ಬರು ಸ್ಥಳದಲ್ಲೇ ಸಾವು; 10ಕ್ಕೂ ಅಧಿಕ ಮಂದಿಗೆ ಗಾಯ