More

    ಮೀಸಲು ವ್ಯವಸ್ಥೆ ಅರಿಯಲು ಒಳಗಣ್ಣು ಬೇಕು

    ಚಳ್ಳಕೆರೆ: ದಮನಿತ, ಶೋಷಿತ ಅಸ್ಪಶ್ಯ ಜಾತಿಗಳನ್ನು ಸಾಮಾಜಿಕವಾಗಿ ಮುಖ್ಯವಾಹಿನಿಗೆ ತರಲು ಅಂಬೇಡ್ಕರ್ ನೀಡಿರುವ ಮೀಸಲು ವ್ಯವಸ್ಥೆಯನ್ನು ಮೇಲ್ವರ್ಗದ ಜನರ ಒಳ್ಳಗಣ್ಣಿನಿಂದ ನೋಡಿದರೆ ಅರ್ಥವಾಗಲಿದೆ ಎಂದು ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದರು.

    ನಗರದ ಬಿಎಂಜಿಎಚ್‌ಎಸ್ ಶಾಲಾ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹೊಲೆಯ-ಮಾದಿಗರ ಒಳಮೀಸಲು ಏಕತಾ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ಜಾತಿಯ ಕೂಪವಾಗಿರುವ ಭಾರತ ದೇಶಕ್ಕೆ ನೀವು ಹೇಗೆ ಸಂವಿಧಾನ ಬರೆಯುತ್ತೀರೆಂದು ಅಂಬೇಡ್ಕರ್ ಅವರನ್ನು ವಿದೇಶಗಳ ಬುದ್ಧಿಜೀವಿಗಳು ಪ್ರಶ್ನಿಸಿದ್ದರು. ಸರ್ವರಿಗೂ ಸಮಬಾಳು, ಸಮಪಾಲು ಎನ್ನುವ ಸಾಮಾಜಿಕ ನ್ಯಾಯದಡಿ ರಚಿಸುವ ಸಂಕಲ್ಪದಂತೆ ಯಶಸ್ವಿಯಾದರು. ಅವರ ಆಶಯದಂತೆ ಸಂವಿಧಾನಬದ್ಧ ಕಾನೂನುಗಳು ಜಾರಿಯಾಗುವ ಮೂಲಕ ಅಸ್ಪಶ್ಯ ಜಾತಿಗಳ ಸಂಖ್ಯೆಗೆ ತಕ್ಕಂತೆ ಮೀಸಲು ವರ್ಗೀಕರಣ ಆಗಬೇಕಿದೆ ಎಂದು ಹೇಳಿದರು.

    ಭಾರತದ ಏಕತೆ ಉಳಿದಿರುವುದು ಸಂವಿಧಾನದ ಕಾರಣಕ್ಕೆ. ಆದರೆ, ಆಡಳಿತ ಸರ್ಕಾರಗಳು ಮೀಸಲು ಹೆಸರಿನಲ್ಲಿ ಕಳಂಕ ಮತ್ತು ದ್ರೋಹ ಎಸಗುತ್ತಿವೆ. 30 ವರ್ಷ ನಡೆಯುತ್ತಿರುವ ಒಳಮೀಸಲು ಹೋರಾಟಕ್ಕೆ ನ್ಯಾಯ ಕೊಡುತ್ತಿಲ್ಲ. 1.5 ಕೋಟಿ ಜನಸಂಖ್ಯೆ ಇರುವ ಎಸ್ಸಿ-ಎಸ್ಟಿ ಸಮುದಾಯದವರು ಈವರೆಗೂ ಮುಖ್ಯಮಂತ್ರಿ ಆಗಲು ಸಾಧ್ಯವಾಗಿಲ್ಲ ಎಂದು ಬೇಸರಿಸಿದರು.

    ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ರಾಜನಹಳ್ಳಿ ಮಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೋರಾಟದ ಫಲವಾಗಿ ಎಸ್ಸಿ ಮೀಸಲು 17ಕ್ಕೆ, ಎಸ್‌ಟಿಗೆ ಶೇ.7ಕ್ಕೆ ಹೆಚ್ಚಳವಾಗಿದೆ. ಆದರೆ, ಆಡಳಿತ ಸರ್ಕಾರಗಳು ಈ ಹೆಚ್ಚಳ ಮೀಸಲಿಗೆ ಕಾನೂನು ರಕ್ಷಣೆ ನೀಡುವ ಬದ್ಧತೆ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.

    ಶೋಷಿತ ಅಸ್ಪಶ್ಯ ಸಮುದಾಯದಲ್ಲಿನ ಜನಸಂಖ್ಯೆಗೆ ತಕ್ಕಂತೆ ಒಳಮೀಸಲು ಕೇಳುವುದು ನ್ಯಾಯಬದ್ಧವಾಗಿದೆ. ಒಳ ಮೀಸಲು ಜಾರಿಯಿಂದ ಭೋವಿ, ಲಂಬಾಣಿ, ಕೊರಚ ಇತರೆ ಜಾತಿಗಳಿಗೆ ಸಮಸ್ಯೆ ಆಗುವುದಿಲ್ಲ ಎಂದರು.

    ಶ್ರೀ ಶರಣ ಹರಳಯ್ಯ ಸ್ವಾಮೀಜಿ, ಮುಖಂಡ ಕೆ.ಟಿ.ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿ ಎಂ.ರವೀಶ್‌ಕುಮಾರ್, ನಗರಸಭಾ ಮಾಜಿ ಸದಸ್ಯ ಎಂ.ಶಿವಮೂರ್ತಿ, ಒಳಮೀಸಲು ಜಾರಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ನರಸಪ್ಪ ಮಾತನಾಡಿದರು.

    ನಗರಸಭಾ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಆರ್.ಮಂಜುಳಾ, ಜಿಪಂ ಮಾಜಿ ಸದಸ್ಯರಾದ ಬಿ.ಪಿ.ಪ್ರಕಾಶಮೂರ್ತಿ, ನರಸಿಂಹರಾಜು, ಮುಖಂಡರಾದ ಪಿ.ತಿಪ್ಪೇಸ್ವಾಮಿ, ಟಿ.ವಿಜಯಕುಮಾರ್, ಕೆ.ಪಾಪಣ್ಣ, ಕೆ.ವೀರಭದ್ರಯ್ಯ, ಚನ್ನಿಗರಾಮಯ್ಯ, ಎಚ್.ಸಮರ್ಥರಾಯ, ಭೀಮನಕೆರೆ ಶಿವಮೂರ್ತಿ, ಎಂ.ಇಂದ್ರೇಶ್, ಡಿ.ಎಂ.ರವೀಂದ್ರ, ಜಯರಾಮಪ್ಪ, ಜಿ.ಮಾರಣ್ಣ, ಡಿ.ಚಂದ್ರು, ಭೀಮಣ್ಣ, ಚಳ್ಳಕೆರಪ್ಪ, ಬಂಡೆ ರಂಗಸ್ವಾಮಿ ಮತ್ತಿತರರು ಇದ್ದರು.

    ಹಳ್ಳಿಗಳಲ್ಲಿ ವ್ಯಾಪಕವಾಗಿ ಅಸ್ಪಶ್ಯತೆ, ಅಸಮಾನತೆ ಘಟನೆಗಳನ್ನು ಕಾಣಲಾಗಿದೆ. ಪ್ರಸ್ತುತ ದಿನಗಳಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆ ಇದೆ. ಆದರೂ, ಹೊಲೆಯ-ಮಾದಿಗ ಸಮುದಾಯದ ಸಮಗ್ರ ಬದಲಾವಣೆಗೆ ಒಳಮೀಸಲು ಅಗತ್ಯವಿದೆ. ಇದರಿಂದ ಎಸ್ಸಿ ಪಟ್ಟಿಯಲ್ಲಿರುವ 101 ಜಾತಿಯ ಅಸ್ತಿತ್ವಕ್ಕೆ ಯಾವುದೇ ರೀತಿ ಧಕ್ಕೆ ಆಗುವುದಿಲ್ಲ.
    ಟಿ.ರಘುಮೂರ್ತಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts