More

    ಸಂಭ್ರಮದ ಪುನರ್ವಸು ಉತ್ಸವ

    ಮೇಲುಕೋಟೆ: ಶ್ರೀ ಚೆಲುವನಾರಾಯಣನನ್ನು ರಾಮಾನುಜಾಚಾರ್ಯರು ಹುತ್ತ ಕರಗಿಸಿ ಜಗತ್ತಿಗೆ ಪ್ರಕಾಶಪಡಿಸಿದ ಪುನರ್ವಸು ಉತ್ಸವ ಮೇಲುಕೋಟೆ ದೇವಾಲಯದಲ್ಲಿ ಸಡಗರ ಸಂಭ್ರದಿಂದ ನೆರವೇರಿತು.

    ಕ್ರಿ.ಶ.1017ರ ಬಹುಧಾನ್ಯ ಸಂವತ್ಸರದ ಮಕರ ಶುಕ್ಲಪುನರ್ವಸು ನಕ್ಷತ್ರದಂದು ಸಾವಿರ ಶಿಷ್ಯರೊಂದಿಗೆ ಯದುಗಿರಿಗೆ ಆಗಮಿಸಿದ ಭಗವದ್ರಾಮಾನುಜರು ಕಾಡಿನ ನಡುವೆಯಿದ್ದ ಹುತ್ತ ಕಂಡು ಹಿಡಿದು ಕಲ್ಯಾಣಿತೀರ್ಥ ಮತ್ತು ಹಾಲಿನಿಂದ ಹುತ್ತ ಕರಗಿಸಿ ಮೊದಲ ಅಭಿಷೇಕ ಮಾಡಿ ಶ್ರೀ ಚೆಲುವನಾರಾಯಣನ ದರ್ಶನ ಪಡೆದ ಕಾರಣ ಪ್ರತಿ ಸಂವತ್ಸರದಲ್ಲೂ ಮಕರ ಶುಕ್ಲ ಪುನರ್ವಸು ಉತ್ಸವ ನೆರವೇರುತ್ತಾ ಬಂದಿದ್ದು, ಶೋಭಕೃತ್ ನಾಮಸಂವತ್ಸರದ ಮಕರ ಶುಕ್ಲಪುನರ್ವಸು ಪವಿತ್ರ ದಿನವಾದ ಬುಧವಾರ ಪುನರ್ವಸು ಮಹೋತ್ಸವ ನೆರವೇರಿತು.

    ವಿದ್ವಾನ್ ಬಿ.ವಿ.ಆನಂದಾಳ್ವಾರ್ ನೇತೃತ್ವದಲ್ಲಿ ವೈಭವಯುತವಾಗಿ ನಡೆದ ರಾಮಾನುಜರ ಪುನರ್ವಸು ಉತ್ಸವದ ನಿಮಿತ್ತ ಚೆಲುವನಾರಾಯಣನ ದೇವಾಲಯದ ಆವರಣವನ್ನು ರಂಗವಲ್ಲಿ, ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು.

    ತಮಿಳುನಾಡಿನಿಂದ ಕರ್ನಾಟಕಕ್ಕೆ ಆಗಮಿಸಿದ ರಾಮಾನುಜರು ತಿರುನಾರಾಯಣನ ದರ್ಶನ ಭಾಗ್ಯಪಡೆದ 928ನೇ ವರ್ಷದ ಪುನರ್ವಸು ಉತ್ಸವದ ಅಂಗವಾಗಿ ಬೆಳಗ್ಗೆ 5.30ಕ್ಕೆ ರಾಮಾನುಜಾಚಾರ್ಯರಿಗೆ ವೇದಪಾರಾಯಣ ಮತ್ತು ವಿಶೇಷ ಆರಾಧನೆಯೊಂದಿಗೆ ಅಭಿಷೇಕ ಮಾಡಲಾಯಿತು. 6.30ರವೇಳೆ ಕಲ್ಯಾಣಿಗೆ ಉತ್ಸವ ನೆರವೇರಿಸಿ, ಬೆಳಗ್ಗೆ 7ರಿಂದ 10.30ರವರೆಗೆ ಕಲ್ಯಾಣಿಯಲ್ಲಿ ಶ್ರೀರಾಮಾನುಜರಿಗೆ ನಿತ್ಯ ಪೂಜಾ ಕೈಂಕರ್ಯ ನೆರವೇರಿತು. ಕಲ್ಯಾಣಿಯಿಂದ ಹೊರಟ ಆಚಾರ್ಯರ ಉತ್ಸವ ಮಧ್ಯಾಹ್ನ 12.30ರ ವೇಳೆಗೆ ದಿವ್ಯಪ್ರಬಂಧ ಪಾರಾಯಣ, ವಿಶೇಷ ಮಂಗಳವಾದ್ಯದೊಂದಿಗೆ ಚೆಲುವನಾರಾಯಣಸ್ವಾಮಿ ದೇವಾಲಯ ತಲುಪಿತು. ಶ್ರೀ ವೈಷ್ಣವ ಪಾರಾಯಣದವರು ಹುತ್ತಕರಗಿಸಿ ಚೆಲುವನಾರಾಯಣಸ್ವಾಮಿಯನ್ನು ದರ್ಶನ ಮಾಡಿ ಸಂತೋಷಗೊಂಡ ರಾಮಾನುಜರೇ ಸ್ವತಃ ಹಾಡಿದ ದಿವ್ಯಮಂತ್ರವನ್ನು ಒಕ್ಕೊರಲಿನಿಂದ ಭಕ್ತಿಯೊಂದಿಗೆ ಪಾರಾಯಣ ಮಾಡಿದರು. ಸಹಸ್ರಾರು ಭಕ್ತರು ಉತ್ಸವದಲ್ಲಿ ಭಾಗಿಯಾಗಿ ಆಚಾರ್ಯರ ದರ್ಶನ ಪಡೆದು ಪುನೀತರಾದರು.

    ವಂಗೀಪುರಂ ತಿರುಮಾಳಿಗೆಯಲ್ಲಿ ರಾಮಾನುಜರಿಗೆ ಸಮರ್ಪಿಸಲು ನೂರಾರು ತಟ್ಟೆಗಳಲ್ಲಿ ಸೇಬು, ಸೀಬೆ, ದಾಳಿಂಬೆ, ಪರಂಗಿ, ಚಕೋತ, ದ್ರಾಕ್ಷಿ, ಮಾವು, ಖರ್ಜೂರ, ಕಲ್ಲುಸಕ್ಕರೆ, ತೆಂಗು, ಕೊಬ್ಬರಿ ಹೀಗೆ ವಿವಿಧ ಬಗೆಯ ಹಣ್ಣುಗಳು ಮತ್ತು ಹೂವುಗಳನ್ನು ಜೋಡಿಸಲಾಗಿತ್ತು. ಉತ್ಸವ ದೇವಾಲಯ ತಲುಪಿದ ನಂತರ ಆಂಧ್ರಪ್ರದೇಶ, ತಮಿಳುನಾಡು ಮುಂತಾದ ಕಡೆಗಳಿಂದ ಆಗಮಿಸಿದ್ದ ನೂರಾರು ಭಕ್ತರೊಂದಿಗೆ ಇಳೆಯಾಳ್ವಾರ್ ಸ್ವಾಮೀಜಿ ದಂಪತಿ ವಿದ್ವಾನ್ ರಾಮಪ್ರಿಯ ಭಾ.ವಂಪಾರ್ಥಸಾರಥಿ, ಭಾ.ವಂ ಯಾಮುನಾಚಾರ್ಯ, ಛತ್ರಿ, ಚಾಮರ, ಮಂಗಳವಾದ್ಯದೊಂದಿಗೆ ದೇವಾಲಯದ ಸುತ್ತ ಭವ್ಯ ಮೆರವಣಿಗೆಯಲ್ಲಿ ತಟ್ಟೆಗಳನ್ನು ಕೊಂಡೊಯ್ದು ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರಿಗೆ ಸಮರ್ಪಿಸಿದರು. ವಿಶೇಷ ಪೂಜಾ ಕೈಂಕರ್ಯ ಮತ್ತು ನಿವೇದನ ನಡೆದ ನಂತರ ಹಣ್ಣುಗಳಿಂದ ಮಾಡಿದ ಪಂಚಾಮೃತ ಮತ್ತು ಕಂದಂಬ ಸಕ್ಕರೆಪೊಂಗಲ್, ದದಿಯೋದನ ಪ್ರಸಾದಗಳನ್ನು ನೆರೆದಿದ್ದ ಸಹಸ್ರಾರು ಭಕ್ತರಿಗೆ ವಿತರಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts