ತುಮಕೂರು : ಪ್ರಯೋಗಾಲಯ ತಂತ್ರಜ್ಞರನ್ನು ಮುಂಚೂಣಿ ಆರೋಗ್ಯ ಕಾರ್ಯಕರ್ತರೆಂದು ಪರಿಗಣಿಸುವಂತೆ ಕೂಗು ಎದ್ದಿದೆ. ಕೋವಿಡ್ ಕೆಲಸದಲ್ಲಿ ಸಕ್ರಿಯವಾಗಿರುವ ಲ್ಯಾಬ್ ಟೆಕ್ನಿಷಿಯನ್ಗಳನ್ನು ಅಧಿಕೃತವಾಗಿ ರಾಜ್ಯ ಸರ್ಕಾರವು ಆರೋಗ್ಯ ಕಾರ್ಯಕರ್ತರೆಂದು ಪರಿಗಣಿಸಿ ವಿಶೇಷ ಭತ್ಯೆ ನೀಡಬೇಕೆಂಬ ಒತ್ತಾಯ ಇದೆ.
ಜಿಲ್ಲೆಯಲ್ಲಿ ಕಾಯಂ, ಗುತ್ತಿಗೆ ಆಧಾರದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 200ಕ್ಕೂ ಹೆಚ್ಚು ಹೆಚ್ಚು ಪ್ರಯೋಗಾಲಯ ತಂತ್ರಜ್ಞರು ಇದ್ದಾರೆ. ಇನ್ನುಳಿದಂತೆ ಖಾಸಗಿ ಪ್ರಯೋಗಾಲಯದಲ್ಲಿ 500ಕ್ಕೂ ಹೆಚ್ಚು ಮಂದಿ ಲ್ಯಾಬ್ ಟೆಕ್ನಿಷಿಯನ್ಗಳು ಕರೊನಾ ಭೀತಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜ್ಯದಲ್ಲಿ 2 ಸಾವಿರಕ್ಕೂ ಹೆಚ್ಚು ಕಾಯಂ ಪ್ರಯೋಗಾಲಯ ತಂತ್ರಜ್ಞರಿದ್ದಾರೆ. ಜತೆಗೆ ಗುತ್ತಿಗೆ ಆಧಾರದಲ್ಲಿ 1 ಸಾವಿರಕ್ಕೂ ಹೆಚ್ಚು ಮಂದಿ ಇದ್ದಾರೆ. ಆದರೆ, ಪ್ರಯೋಗಾಲಯ ತಂತ್ರಜ್ಞರನ್ನು ಸರ್ಕಾರ ಸಂಪೂರ್ಣ ಕಡೆಗಣಿಸಿದೆ. ಕರೊನಾ ಮೊದಲನೇ ಅಲೆಯ ಸಂದರ್ಭದಲ್ಲಿಯೂ ಫ್ರಂಟ್ಲೈನ್ ಕರೊನಾ ವಾರಿಯರ್ಸ್ ಅಂತ ಪರಿಗಣಿಸಲಿಲ್ಲ. ಈಗ ಎರಡನೇ ಅಲೆ ಬಂದಿದ್ದು ಕರೊನಾ ಪರೀಕ್ಷೆಯಲ್ಲಿ ತೊಡಗಿಸಿಕೊಂಡಿರುವ ತಂತ್ರಜ್ಞರನ್ನು ಮುಂಚೂಣಿ ಆರೋಗ್ಯ ಕಾರ್ಯಕರ್ತರೆಂದು ಅಧಿಕೃತವಾಗಿ ಪರಿಗಣಿಸಿಲ್ಲ ಎಂಬ ನೋವು ಲ್ಯಾಬ್ ಟೆಕ್ನಿಷಿಯನ್ಗಳಲ್ಲಿದೆ.
ಕೊರೊನಾ ಸೋಂಕಿತರ ಗಂಟಲು ದ್ರವ ಸಂಗ್ರಹಿಸುವ ಕೆಲಸ, ಆರ್ಟಿಪಿಸಿಆರ್ ಕೇಂದ್ರಗಳಲ್ಲಿ ಕರೊನಾ ಪರೀಕ್ಷೆ ಎಲ್ಲ ಹಂತಗಳಲ್ಲೂ ಲ್ಯಾಬ್ ಟೆಕ್ನಿಷಿಯನ್ಗಳು ಕಾರ್ಯನಿರ್ವಹಿಸುತ್ತಾರೆ. ಟೆಸ್ಟ್ಗಳ ಸಂಖ್ಯೆ ಪ್ರತಿನಿತ್ಯ ಹೆಚ್ಚುತ್ತಿದ್ದು ಒತ್ತಡದಲ್ಲಿ ಟೆಕ್ನಿಷಿಯನ್ಗಳು ಕಾರ್ಯನಿರ್ವಹಿಸುತ್ತಿದ್ದು ಯಾವುದೇ ಭತ್ಯೆಗಳನ್ನು ಸರ್ಕಾರ ಈವರೆಗೆ ನೀಡಿಲ್ಲ. ಇನ್ನಾದರೂ ಮುಂಚೂಣಿ ಆರೋಗ್ಯ ಕಾರ್ಯಕರ್ತರೆಂದು ಪರಿಗಣಿಸಿ ಸರ್ಕಾರ ಆದೇಶ ಹೊರಡಿಸಬೇಕೆಂಬುದು ಲ್ಯಾಬ್ ಟೆಕ್ನಿಷಿಯನ್ಗಳು ಆಗ್ರಹ.
ವೈದ್ಯರು, ಶುಶ್ರೂಷಕರಿಗೆ ಕೋವಿಡ್ ಕೆಲಸ ನಿರ್ವಹಣೆಗಾಗಿ ವಿಶೇಷ ಭತ್ಯೆ ನೀಡಲಾಗಿದೆ. ಈ ಹಿಂದೆಯೇ ಲ್ಯಾಬ್ ಟೆಕ್ನಿಷಿಯನ್ಗಳಿಗೂ ವಿಶೇಷ ಭತ್ಯೆ ನೀಡುವಂತೆ ಹಿಂದಿನ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಅಲ್ಲದೆ, ಖಾಸಗಿ ಲ್ಯಾಬ್ಗಳಲ್ಲಿನ ಪ್ರಯೋಗಾಲಯ ತಂತ್ರಜ್ಞರೂ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದು ಅವರನ್ನು ಫ್ರಂಟ್ಲೈನ್ ವಾರಿಯರ್ಸ್ ಎಂದು ಪರಿಗಣಿಸುವಂತೆ ಮನವಿ ಮಾಡಲಾಗಿತ್ತು. ಈವರೆಗೆ ಯಾರೊಬ್ಬರೂ ತಲೆಕೆಡಿಸಿಕೊಂಡಿಲ್ಲ.
ಬೆಳ್ಳಿ ಲೋಕೇಶ್, ಅಧ್ಯಕ್ಷ, ಜಿಲ್ಲಾ ಪ್ರಯೋಗಾಲಯ ತಂತ್ರಜ್ಞರ ಸಂಘ