ಚನ್ನಪಟ್ಟಣ: ಕರೊನಾ ಸೋಂಕಿತ ಜಾನಪದ ಕಲಾವಿದನೊಬ್ಬ ಕೋವಿಡ್ ಆಸ್ಪತ್ರೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಹೊನ್ನಾನಾಯಕ್ಕನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಜಾಗೃತಿ ಪುಟ್ಟಸ್ವಾಮಿ (36) ಮೃತ ವ್ಯಕ್ತಿ. ತಾಲೂಕಿನ ಹೊಟ್ಟಿಗನಹೊಸಹಳ್ಳಿ ಗ್ರಾಮದ ಇವರಿಗೆ ನಾಲ್ಕು ದಿನದ ಹಿಂದೆ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ತಾಲೂಕು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಮಂಗಳವಾರ ರಾತ್ರಿ ತಾನು ಚಿಕಿತ್ಸೆ ಪಡೆಯುತ್ತಿದ್ದ ಕೊಠಡಿಯಲ್ಲಿನ ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕರೊನಾ ಸೋಂಕಿಗೆ ಹೆದರಿ ಅಥವಾ ಮಾನಸಿಕ ಖಿನ್ನತೆಯಿಂದಾಗಿ ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನಲಾಗಿದೆ. ಆತ್ಮಹತ್ಯೆ ವಿಚಾರ ತಿಳಿದ ಕೂಡಲೇ, ಜಿಪಂ ಸಿಇಒ ಇಕ್ರಂ, ತಹಸೀಲ್ದಾರ್ ಎಲ್.ನಾಗೇಶ್, ಎಎಸ್ಪಿ ರಾಮರಾಜನ್, ಟಿಎಚ್ಒ ಕೆ.ಪಿ. ರಾಜು, ಗ್ರಾಮಾಂತರ ವೃತ್ತ ನಿರೀಕ್ಷಕ ಸಿ.ವಸಂತ್, ಎಂ.ಕೆ.ದೊಡ್ಡಿ ಪಿಎಸ್ಐ ಸದಾನಂದ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಎಂ.ಕೆ. ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ತಾಲೂಕು ಆಡಳಿತದ ವತಿಯಿಂದ ಸರ್ಕಾರಿ ನಿಯಮದಂತೆ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೇರವೇರಿಸ ಲಾಯಿತು.
ಮೃತ ಪುಟ್ಟಸ್ವಾಮಿ ತಾಲೂಕಿನ ಯುವ ಜಾನಪದ ಕಲಾವಿದನಾಗಿದ್ದು, ಜಾಗೃತಿ ಸಾಂಸ್ಕೃತಿಕ ಹಾಗೂ ಸಾಮಾಜಿಕ ಟ್ರಸ್ಟ್ ರಚಿಸಿಕೊಂಡು ಜಾನಪದ ಕ್ಷೇತ್ರ ಹಾಗೂ ಅಕ್ಷರ ಬೆಳಕು ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತರು ಪತ್ನಿ, 2 ವರ್ಷದ ಮಗ ಹಾಗೂ ಮೂರು ತಿಂಗಳು ಹೆಣ್ಣು ಮಗುವನ್ನು ಆಗಲಿದ್ದಾರೆ.