ಬೆಂಗಳೂರು: ಭಾನುವಾರ ನಡೆದ ನಾಗರಿಕ ಪೊಲೀಸ್ ಪೇದೆ ಹುದ್ದೆಯ ಲಿಖಿತ ಪರೀಕ್ಷೆಯಲ್ಲಿ ಮೊಬೈಲ್ ಫೋನ್ ಬಳಕೆ ಮಾಡಿದ ಅಭ್ಯರ್ಥಿ ವಿರುದ್ಧ ಪುಲಿಕೇಶಿನಗರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪುಲಿಕೇಶಿನಗರ ಉಪವಿಭಾಗದ ಎಸಿಪಿ ತಬರಕ್ ಫಾತೀಮಾ ಕೊಟ್ಟ ದೂರಿನ ಮೇರೆಗೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹರುವನಹಳ್ಳಿಯ ತಿಪ್ಪೇಸ್ವಾಮಿ ಎಂಬಾತನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ವಂಚನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯ ಪೊಲೀಸ್ ಇಲಾಖೆಯು ನಾಗರಿಕ ಪೊಲೀಸ್ ಪೇದೆ ಹುದ್ದೆಯ ಲಿಖಿತ ಪರೀಕ್ಷೆಯನ್ನು ಭಾನುವಾರ ನಡೆಸಿತ್ತು. ಫ್ರೇಸರ್ ಟೌನ್ನಲ್ಲಿರುವ ‘ಸೆವೆಂತ್ ಡೇ ಅಡ್ವೆಂಟಿಸ್ಟ್ ಹೈಸ್ಕೂಲ್’ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪರೀಕ್ಷಾ ಕೇಂದ್ರದ ಮೇಲುಸ್ತುವಾರಿ ಅಧಿಕಾರಿಯಾಗಿ ಪುಲಿಕೇಶಿನಗರ ಉಪವಿಭಾಗದ ಎಸಿಪಿ ತಬರಕ್ ಫಾತೀಮಾ ಕರ್ತವ್ಯದಲ್ಲಿದ್ದರು.
ಈ ವೇಳೆ ಕೊಠಡಿ ಸಂಖ್ಯೆ 10ರಲ್ಲಿ ಅಭ್ಯರ್ಥಿಯೊಬ್ಬ ಮೊಬೈಲ್ಫೋನ್ ಬಳಸಿ ಪರೀಕ್ಷೆ ಬರೆಯುತ್ತಿರುವುದು ಬೆಳಕಿಗೆ ಬಂದಿತ್ತು. ಆತನನ್ನು ತಪಾಸಣೆ ನಡೆಸಿದಾಗ ಮೊಬೈಲ್ ಫೋನ್ ಪತ್ತೆಯಾಗಿದೆ. ನಕಲು ಮಾಡಿ ಪರೀಕ್ಷೆ ಬರೆಯುತ್ತಿದ್ದ ಹಿನ್ನೆಲೆಯಲ್ಲಿ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸ್ ನೇಮಕಾತಿ ವಿಭಾಗದ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.