ಚನ್ನಪಟ್ಟಣ: ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಎಂಎಲ್ಸಿ ಸಿ.ಪಿ. ಯೋಗೇಶ್ವರ್ ಮಾತಿನ ಸಮರ ಮುಂದುವರಿಸಿದ್ದಾರೆ. ‘ಡಿ.ಕೆ. ಶಿವಕುಮಾರ್ ಒಬ್ಬ ದೊಡ್ಡ ಕಳ್ಳ. ಅವರ ಫೋನ್ ಕದ್ದಾಲಿಕೆ ಮಾಡಿ ನಮ್ಮ ಸರ್ಕಾರ ಯಾವ ರಾಜ್ಯ ಗೆಲ್ಲಬೇಕಾಗಿದೆ?’ ಎಂದು ಸಿ.ಪಿ. ಯೋಗೇಶ್ವರ್ ಕುಟುಕಿದ್ದಾರೆ.
ನಗರದ ತಾಪಂ ಸಭಾಂಗಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿವೈ, ‘ಡಿಕೆಶಿ ಫೋನ್ ಟ್ಯಾಪಿಂಗ್ ಆರೋಪ ಮಾಡುತ್ತಿದ್ದಾರೆ. ಆದರೆ, ಅವರೇ ಒಬ್ಬ ಕಳ್ಳ. ಅವರು ಇನ್ನೊಬ್ಬರ ಮೇಲೆ ಆರೋಪ ಮಾಡೋಕೆ ಏನಿದೆ? ಫೋನ್ ಕದ್ದಾಲಿಕೆ ಆರೋಪ ಶುದ್ಧಸುಳ್ಳು. ಅವರ ಫೋನ್ನನ್ನು ಯಾವ ಉದ್ದೇಶಕ್ಕಾಗಿ ಕದ್ದಾಲಿಕೆ ಮಾಡಬೇಕು? ಅದರ ಅಗತ್ಯ ಏನಿದೆ? ಅವರ ಫೋನ್ ಕದ್ದಾಲಿಕೆ ಮಾಡಿ ಯಾವ ರಾಜ್ಯ ಗೆಲ್ಲಬೇಕಾಗಿದೆ?’ ಎನ್ನುವ ಮೂಲಕ ಡಿಕೆಶಿ ಆರೋಪಕ್ಕೆ ತಿರುಗೇಟು ನೀಡಿದರು.
ಇದನ್ನೂ ಓದಿರಿ ಅಧಿಕಾರ, ಹಣಕ್ಕಾಗಿ ಹಲವು ಬಾರಿ ಡಿ.ಕೆ.ಶಿವಕುಮಾರ್ ನನ್ನ ಕಾಲಿಗೆ ಬಿದ್ದಿದ್ದಾರೆ… ಅದರ ವಿಡಿಯೋ ಇದೆ: ಸಿ.ಪಿ.ಯೋಗೇಶ್ವರ್
‘ಡಿಕೆಶಿ ಅವರೇ ಈ ಹಿಂದೆ ಫೋನ್ ಟ್ಯಾಪಿಂಗ್ ಮಾಡಿಸಿ, ಅದನ್ನು ನಮ್ಮ ಪಕ್ಷದ ಮೇಲೆ ಆರೋಪ ಹೊರಿಸಿದ್ದರು. ರಾಜ್ಯದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಅವರು ಇಂತಹ ಆರೋಪ ಮಾಡುತ್ತಿದ್ದಾರೆ ಎಂದ ಯೋಗೇಶ್ವರ್, ಫೋನ್ ಕದ್ದಾಲಿಕೆ ಮಾಡುವುದರಲ್ಲಿ ಡಿಕೆಶಿ ಅನುಭವಿ’ ಎಂದು ಟೀಕಿಸಿದರು.
‘ಇನ್ನು ನರೇಗಾ ಹಣವನ್ನು ಕನಕಪುರದವರು ಜಾಸ್ತಿ ಪಡೆಯುತ್ತಿದ್ದಾರೆ. ಇದರಿಂದಾಗಿ ಮೂರು ತಾಲೂಕುಗಳಿಗೆ ಅನ್ಯಾಯವಾಗುತ್ತಿದೆ. ಅಧಿಕಾರಿಗಳು ಜಿಲ್ಲೆಯಲ್ಲಿ ಹಣವನ್ನು ಸಮಾನ ಹಂಚಿಕೆ ಮಾಡಬೇಕು. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುವ ಸಮಯಕ್ಕೆ ಸರಿಯಾಗಿ ಒಬ್ಬರು ಅಧಿಕಾರಿಗಳ ಸಭೆ ಕರೆಯುತ್ತಾರೆ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿದ್ದಂತೆ, ಕನಕಪುರದವರು ಹಣ ಡ್ರಾ ಮಾಡಿಕೊಳ್ಳುತ್ತಾರೆ’ ಎಂದ ಯೋಗೇಶ್ವರ್, ಸಂಸದ ಡಿ.ಕೆ.ಸುರೇಶ್ ಹೆಸರೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿರಿ ಕಾಂಗ್ರೆಸ್ಗೆ ಬರುವೆ ಎಂದು ಯೋಗೇಶ್ವರ್ ನನ್ನ ಕಾಲು ಹಿಡಿದಿದ್ದ: ಡಿ.ಕೆ. ಶಿವಕುಮಾರ್
ಇನ್ನು ಎಂಎಲ್ಸಿ ಆಗಿ ನಾಮನಿರ್ದೇನಗೊಂಡ ಮರುದಿನವೇ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಯೋಗೇಶ್ವರ್, ‘ಮಾಜಿ ಸಿಎಂ ಎಚ್ಡಿಕೆ ಮತ್ತು ಡಿಕೆಶಿ ವಿರುದ್ಧ ಹೋರಾಡಲು ನನಗೆ ಕಷ್ಟವೇನಿಲ್ಲ. ಇವರಿಬ್ಬರೂ ರಿಟೈಡ್ ಆಗಿರುವ ಕುದುರೆಗಳು’ ಎಂದು ಕುಟುಕಿದ್ದರು.
ಇದೀಗ ಎಚ್.ಡಿ. ಕುಮಾರಸ್ವಾಮಿ ಪರ ಮೃದುಧೋರಣೆ ವ್ಯಕ್ತಪಡಿಸುತ್ತಿರುವ ಸಿಪಿವೈ, ‘ಬಿಜೆಪಿ ಸರ್ಕಾರವನ್ನು ಕುಮಾರಸ್ವಾಮಿ ಹೊಗಳುತ್ತಿದ್ದಾರೆ. ಅವರು ನಮ್ಮ ಸರ್ಕಾರದ ಜೊತೆ ಹೊಂದಾಣಿಕೆಯಿಂದ ಇದ್ದೇನೆ ಎಂದು ಹೇಳಿಕೊಂಡಿದ್ದಾರೆ. ಕುಮಾರಸ್ವಾಮಿ ಬಲಯುತವಾಗಿದ್ದಾರೆ. ಅವರು ಸರ್ಕಾರದಿಂದ ಹಣ ತಂದು ಅಭಿವೃದ್ಧಿ ಮಾಡಲು ಶಕ್ತರಾಗಿದ್ದಾರೆ. ನಾನು ಕೂಡ ಅವರೊಂದಿಗೆ ಸಹಕರಿಸುತ್ತೇನೆ’ ಎಂದರು.
ಮಿಸ್ಟರ್ ಡಿಕೆಶಿ, ನೀವು ಜಾಮೀನಿನ ಮೇಲೆ ಹೊರಗಿದ್ದೀರಿ ಎಂಬುದನ್ನ ಅರಿತುಕೊಳ್ಳಿ; ಪ್ರಹ್ಲಾದ್ ಜೋಶಿ