ಮೈಸೂರು: ನಗರದ ಸ್ಕಾಲ್ ಇಂಟರ್ನ್ಯಾಷನಲ್ ಅಧ್ಯಕ್ಷರಾಗಿ ಸಿ.ಎ.ಜಯಕುಮಾರ್ ನೇಮಕಗೊಂಡಿದ್ದಾರೆ.
ಖಾಸಗಿ ಹೋಟೆಲ್ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಭಾಗದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಕಾರ್ಯದರ್ಶಿಯಾಗಿ ನಾಗೇಶ್, ಉಪಾಧ್ಯಕ್ಷರಾಗಿ ಎಸ್.ಜೆ.ಅಶೋಕ್, ಖಜಾಂಚಿಯಾಗಿ ಸಮರ್ಥ್ ವೈದ್ಯ ಹಾಗೂ ಪಿಆರ್ ನಿರ್ದೇಶಕರಾಗಿ ಧಾತ್ರಿ ಭಾರದ್ವಾಜ್ ನೇಮಕಗೊಂಡರು.
ನೂತನ ಅಧ್ಯಕ್ಷ ಸಿ.ಎ.ಜಯಕುಮಾರ್ ಮಾತನಾಡಿ, ಮೈಸೂರು ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದ್ದು, ಪ್ರವಾಸೋದ್ಯಮ ಇನ್ನೂ ಅಭಿವೃದ್ಧಿಯಾಗಬೇಕಿದೆ. ಸ್ಕಾಲ್ ಅಧ್ಯಕ್ಷನಾಗಿ ಇನ್ನು ಮುಂದೆ ಮೈಸೂರಿನ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಪದಾಧಿಕಾರಿಗಳು, ಸದಸ್ಯರ ಸಹಕಾರದೊಂದಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಇದೆ. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ಕೋರಿದರು.
ಸ್ಕಾಲ್ ಇಂಟರ್ನ್ಯಾಷನಲ್ ಮೈಸೂರು ವಿಭಾಗದ ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ಮಾತನಾಡಿ, ಈ ಎರಡು ವರ್ಷಗಳಲ್ಲಿ ಸ್ಕಾಲ್ನಿಂದ ಮೈಸೂರಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ನಾನು ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟ ನನ್ನ ತಂಡಕ್ಕೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.
ಕಳೆದ ವರ್ಷ ಮೈಸೂರಿನಲ್ಲಿ ನಡೆದ ಸ್ಕಾಲ್ ಇಂಡಿಯಾ ಕಾಂಗ್ರೆಸ್ ಯಶಸ್ವಿಯಾಗಿದ್ದನ್ನು ಸ್ಮರಿಸುತ್ತೇನೆ. ನನ್ನ ಅವಧಿಯಲ್ಲಿ ನಡೆದ ಅತಿದೊಡ್ಡ ಕಾರ್ಯಕ್ರಮ ಅದು. ಇನ್ನು ಮುಂದೆ ಕಾರ್ಯ ನಿರ್ವಹಿಸುವ ತಂಡಕ್ಕೂ ನನ್ನ ಸಂಪೂರ್ಣ ಸಹಕಾರ ಇದೆ ಎಂದರು.
ಸ್ಕಾಲ್ ಇಂಟರ್ನ್ಯಾಷನಲ್ ಬೆಂಗಳೂರು ವಿಭಾಗದ ಪದಾಧಿಕಾರಿಗಳಾದ ಸುದೀಪ್ತಾ ದೇಬ್, ಅಯ್ಯಪ್ಪ ಸೋಮಯ್ಯ, ಮಣಿಮೇಗಲೈ, ಸ್ಕಾಲ್ ಮೈಸೂರು ವಿಭಾಗದ ಸದಸ್ಯರು ಇದ್ದರು.