ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ (ಮೇ 19) ಬೆಳಗ್ಗೆಯಿಂದಲೇ ಖಾಸಗಿ ಹಾಗೂ ಸರ್ಕಾರಿ ಬಸ್ಗಳು ಸಂಚರಿಸಲಿವೆ.
ಸೋಮವಾರ ಬೆಳಗ್ಗೆ ಹಿರಿಯ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಸಭೆ ನಡೆಸಿದ ಸಿಎಂ ಬಿ.ಎಸ್. ಯಡಿಯೂರಪ್ಪ ಈ ನಿರ್ಧಾರ ಪ್ರಕಟಿಸಿದರು.
ರಾಜ್ಯ ಸರ್ಕಾರ ಭಾನುವಾರವೇ ಈ ಕುರಿತ ನಿರ್ಣಯ ಪ್ರಕಟಿಸುವ ನಿರೀಕ್ಷೆಯಿತ್ತು. ಆದರೆ, ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ ವಿಳಂಬವಾದ ಹಿನ್ನೆಲೆ ಸೋಮವಾರ, ಮಂಗಳವಾರಕ್ಕೆ ಅನ್ವಯವಾಗುವಂತೆ ಲಾಕ್ಡೌನ್ ವಿಸ್ತರಿಸಿತ್ತು. ಭಾನುವಾರ ಸಂಜೆ ಕೇಂದ್ರ ವಿಸ್ತೃತ ಮಾರ್ಗಸೂಚಿ ಬಿಡುಗಡೆ ಮಾಡಿ, ಅಂತರ ಜಿಲ್ಲಾ ಬಸ್ ಸಂಚಾರಕ್ಕೆ ಆರಂಭಿಸುವ ಅವಕಾಶವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ. ಎರಡೂ ರಾಜ್ಯಗಳು ಒಪ್ಪಿದರೆ, ಅಂತರರಾಜ್ಯ ಬಸ್ ಸಂಚಾರವನ್ನು ಆರಂಭಿಸಬಹುದು ಎಂದು ಹೇಳಿತ್ತು.
ಇದನ್ನೂ ಓದಿ; ಇನ್ನಷ್ಟು ಹತ್ತಿರವಾಯ್ತು ಮೌಂಟ್ ಎವರೆಸ್ಟ್…!
ಬೆಳಗ್ಗೆಯಿಂದ ನಾಲ್ಕೂ ನಿಗಮ ಕಾರ್ಯಾಚರಣೆ ಮಾಡುತ್ತವೆ. ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿ ಬಸ್ ನಲ್ಲಿ ಮೂವತ್ತು ಮಂದಿಗೆ ಅವಕಾಶ. ಚಾಲಕನ ಕ್ಯಾಬಿನ್ ಸೀಲ್ ಮಾಡಲಾಗುತ್ತದೆ. ನಷ್ಟ ಭರ್ತಿ ಮಾಡಿಕೊಡುವುದಾಗಿ ಸಿಎಂ ಹೇಳಿದ್ದಾರೆ. ಹೀಗಾಗಿ ಪ್ರಯಾಣ ದರ ಹೆಚ್ಚಿಸಲ್ಲ. ಎಸಿ ಬಸ್ ಹೊರತುಪಡಿಸಿ, ರಾಜ್ಯದ ಎಲ್ಲ ಕಡೆ ಸಾಮಾನ್ಯ ಬಸ್ ಸೇವೆ ಆರಂಭವಾಗಲಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಓಲಾ, ಉಬರ್, ಆಟೋ ಓಡಾಟಕ್ಕೆ ಯಾವುದೇ ನಿರ್ಬಂಧ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. 60 ದಿನದಿಂದ ಖಾಸಗಿ ಬಸ್ನವರು ಓಡಾಟ ನಿಲ್ಲಿಸಿದ್ದು, ಅವರು ಹಲವು ಬೇಡಿಕೆ ಮಂಡಿಸಿದ್ದಾರೆ. ತೆರಿಗೆ ವಿನಾಯಿತಿ ಕೋರಿದ್ದಾರೆ. ಇನ್ನೆರಡು ದಿನದಲ್ಲಿ ಪೂರಕ ನಿರ್ಣಯ ಕೈಗೊಳ್ಳಲಾಗುತ್ತದೆ. ಪ್ರಯಾಣದ ವೇಳೆ ಮಾಸ್ಕ್ ಬಳಕೆ ಕಡ್ಡಾಯ. ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಉತ್ತಮ ಎಂದು ಸವದಿ ಹೇಳಿದ್ದಾರೆ.
ಮಹಾರಾಷ್ಟ್ರ, ತಮಿಳುನಾಡು,ಆಂಧ್ರಪ್ರದೇಶ, ಕೇರಳ, ತೆಲಂಗಾಣ ಗಡಿಭಾಗದ ಕನ್ನಡಿಗರು ಮತ್ತಷ್ಟು ದಿನ ಕಾಯಬೇಕಾಗುತ್ತದೆ. ಗಡಿ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದರಿಂದ ಅಂತರರಾಜ್ಯ ಬಸ್ ಸಂಚಾರ ಇನ್ನಷ್ಟು ವಿಳಂಬವಾಗಲಿದೆ.