ನವದೆಹಲಿ: ಯಾವುದೇ ತೆರಿಗೆಯಿಲ್ಲದೆ, ಜನರ ಓಲೈಕೆಯೂ ಇಲ್ಲದ ಕೇಂದ್ರ ಮಧ್ಯಂತರ ಬಜೆಟ್ ಸ್ವಾಗತಾರ್ಹವಾದದ್ದು ಎಂದು ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ತಿಳಿಸಿದ್ದಾರೆ.
ಇದನ್ನೂ ಓದಿ: ರಿಲಯನ್ಸ್ ಮತ್ತೆ ನಂ.1: ಈ ಪಟ್ಟಿಯಲ್ಲಿ 3 ಅದಾನಿ ಕಂಪನಿಗಳು ಹೊರಬಿದ್ದಿವೆ!
ಗುರುವಾರ ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ 2024 ಮಂಡನೆ ಬಳಿಕ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಪೋಸ್ಟ್ ಹಾಕಿ ಈ ಬಜೆಟ್ನಿಂದ ನಾನು ಸಂತಸಗೊಂಡಿದ್ದೇನೆ. ಇದು ಈ ಹಿಂದಿನಿಂದ ಇದ್ದ ಸಂಪ್ರದಾಯಗಳನ್ನು ಮುರಿದು ನೈಜ ಮತ್ತು ವಾಸ್ತವತೆಯಿಂದ ಕೂಡಿದ್ದಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅತ್ಯಂತ ಚಿಕ್ಕ, ಚೊಕ್ಕದಾಗಿ ಮಾತನಾಡಿ, ಸಂಕ್ಷಿಪ್ತತೆಯಿಂದ ಕೂಡಿದ ಅಲ್ಪಾವದಿ ಬಜೆಟ್ ಮಂಡಿಸಿದ್ದಾರೆ. ಸಾಮಾನ್ಯವಾಗಿ ಚುನಾವಣಾ ಪೂರ್ವ ಬಜೆಟ್ಗಳಲ್ಲಿ ಘೋಷಿಸುತ್ತಿದ್ದಂತೆ ಯಾವುದೇ ಜನಪರ ಕ್ರಮಗಳನ್ನು ಘೋಷಿಸಲಾಗಿಲ್ಲ. ಇದು ದೇಶವನ್ನು ದೃಢತೆಯತ್ತ ಕೊಂಡೊಯ್ಯುವಲ್ಲಿ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿತ್ತೀಯ ಕೊರತೆ ಗುರಿಯು ಊಹಿಸಿದ್ದಕ್ಕಿಂತ ಉತ್ತಮವಾಗಿದೆ. ವಿವೇಕವು ನಿರ್ಣಾಯಕ ವಿಜಯವನ್ನು ಗಳಿಸುತ್ತದೆ ಎಂಬುದಕ್ಕೆ ಈ ಬಜೆಟ್ ಸಾಕ್ಷಿಯಾಗಿದೆ. ಯಾವುದೇ ಪ್ರಮುಖ ತೆರಿಗೆ ಬದಲಾವಣೆಯಿಲ್ಲದೆ ಆರ್ಥಿಕ ಸ್ಥಿರತೆಗೆ ಬಜೆಟ್ ಪೂರಕವಾಗಿದೆ. ಇದು ಈ ಬಜೆಟ್ನಲ್ಲಿ ಸ್ಪಷ್ಟವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಬಜೆಟ್ ಮಂಡನೆಯಾಗುತ್ತಿದ್ದಾಗ ನಾಟಕೀಯ ಘಟನೆಗಳು ನಡೆಯುತ್ತಿದ್ದವು. ನೀತಿ, ಘೋಷಣೆಗಳ ನಿರೀಕ್ಷೆಗಳನ್ನು ಅವಾಸ್ತವಿಕವಾಗಿ ಮಾಡಲಾಗುತ್ತಿತ್ತು. ಜನರಲ್ಲಿ ಬಜೆಟ್ ಜ್ವರ ಏರುವಂತೆ ಮಾಡಲಾಗುತ್ತಿತ್ತು. ಆದರೆ ಈ ಆಯವ್ಯಯವು ಪರಿವರ್ತನೆ ತರುವ ನಿಟ್ಟಿನಲ್ಲಿ ಮಂಡಿಸಲಾಗಿದೆ ಎಂದರು.
ಈ ಬಜೆಟ್ ನಿಂದ ಜಾಗತಿಕ ಹೂಡಿಕೆದಾರರೊಂದಿಗೆ ನಾವು ಹೆಚ್ಚು ವಿಶ್ವಾಸವನ್ನು ಗಳಿಸುತ್ತೇವೆ. ಜಿಡಿಪಿಗೆ ಹೆಚ್ಚಿನ ತೆರಿಗೆ ಅನುಪಾತವು ದೀರ್ಘಕಾಲದಿಂದ ನಿರೀಕ್ಷಿಸಲ್ಪಟ್ಟಿದೆ. ಅನಗತ್ಯ ವೆಚ್ಚಗಳಿಗೆಕಡಿವಾಣ ಹಾಕಲು ಇದು ಬಲವಾದ ಅಡಿಪಾಯವನ್ನು ಹಾಕಿದೆ. ಸಮೃದ್ಧ, ಸದೃಢ ಭಾರತ ಕಟ್ಟಲು, ನಮ್ಮ ಯೋಜನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಗಮನಹರಿಸಬಹುದು ಎಂದು ಆನಂದ್ ಮಹೀಂದ್ರಾ ಕೊಂಡಾಡಿದ್ದಾರೆ.
ಬಜೆಟ್ 2024: ಮುಂದಿನ 5ವರ್ಷ ಭಾರತದಲ್ಲಿ ಅದ್ಭುತ ಪ್ರಗತಿ.. ನಿರ್ಮಲಾ ಸೀತಾರಾಮನ್