ಬೆಂಗಳೂರು: ವಿಧಾನಸಭೆ ಚುನಾವಣೆ ನಿಮಿತ್ತ ಶನಿವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು, ನಗರದಲ್ಲಿ ರೋಡ್ ಶೋ ನಡೆಸಲಿರುವ ಹಿನ್ನೆಲೆಯಲ್ಲಿ ಭದ್ರತೆಗಾಗಿ ಮೂರು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ರೋಡ್ ಶೋ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ 4 ಮಂದಿ ಡಿಸಿಪಿಗಳು, 20 ಮಂದಿ ಎಸಿಪಿಗಳು, 68 ಮಂದಿ ಇನ್ಸ್ಪೆಕ್ಟರ್ಗಳು, 109 ಸಬ್ಇನ್ಸ್ಪೆಕ್ಟರ್ಗಳು, 2800 ಹೆಡ್ ಕಾನ್ಸ್ಟೇಬಲ್ಗಳ ಜತೆಗೆ ಕೆಎಸ್ಆರ್ಪಿ ಮತ್ತು ಸಿಎಆರ್ 10 ತುಕಡಿಗಳು ಭದ್ರತೆಯಲ್ಲಿರುತ್ತವೆ.
4.7 ಕಿ.ಮೀ. ರೋಡ್ ಶೋ
ಸಂಜೆ 6:30ರ ಸುಮಾರಿಗೆ ಮೋದಿ ಅವರು ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾಗಡಿ ರಸ್ತೆಯ ನೈಸ್ ರಸ್ತೆ ಜಂಕ್ಷನ್ನಿಂದ ಸುಂಕದಕಟ್ಟೆವರೆಗೆ 4.7 ಕಿ.ಮೀ. ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ಈ ಮಾರ್ಗದ ಅಕ್ಕಪಕ್ಕದ ರಸ್ತೆಗಳ ಬದಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ರಸ್ತೆಯ ಎರಡೂ ಪಕ್ಕದಲ್ಲಿನ ಕಟ್ಟಡಗಳ ಮೇಲೆ ನಿವಾಸಿಗಳು ನಿಂತುಕೊಳ್ಳದಂತೆ ಸೂಚನೆ ನೀಡಲಾಗಿದೆ. ಪ್ರಧಾನಿ ಅವರು ರೋಡ್ ಶೋ ನಡೆಸುವ ಮಾರ್ಗದ ಪ್ರದೇಶಗಳಲ್ಲಿ ಹೊಸದಾಗಿ ಬಾಡಿಗೆಗೆ ಬಂದಿರುವ ವ್ಯಕ್ತಿಗಳ ಬಗ್ಗೆಯೂ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಎಷ್ಟು ದಿನಗಳಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಅವರ ಸ್ವಂತ ವಿಳಾಸ, ಅವರ ವೃತ್ತಿ ಇನ್ನಿತರ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಜತೆಗೆ ಅನುಮಾನಾಸ್ಪಾದ ವ್ಯಕ್ತಿಗಳು ಕಂಡು ಬಂದರೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪ್ರತಿ 5 ಮೀಟರ್ಗೆ ಒಬ್ಬ ಪೊಲೀಸ್ ನಿಯೋಜನೆ
ಪ್ರಧಾನಿ ಭದ್ರತಾ ತಂಡವು ನಗರ ಪೊಲೀಸರೊಂದಿಗೆ ರೋಡ್ ಶೋ ನಡೆಯುವ ಸ್ಥಳ ಪರಿಶೀಲನೆ ನಡೆಸಿದ್ದು, ಎಲ್ಲೆಲ್ಲೆ ಜನರನ್ನು ನಿಲ್ಲಿಸಬೇಕು. ಯಾವ ಯಾವ ರಸ್ತೆ ಯಾವ ಬಿಲ್ಡಿಂಗ್ ಬಗ್ಗೆ ಹೆಚ್ಚು ನಿಗಾ ವಹಿಸಬೇಕೆಂದು ಸಲಹ ನೀಡಿದ್ದಾರೆ. ವಿಶೇಷ ಅಂದರೆ ಮೋದಿ ರೋಡ್ ಶೋ ನಡೆಸುವ ರಸ್ತೆಯ ಉದ್ದಗಲಕ್ಕೂ ಪ್ರತಿ 5 ಮೀಟರ್ಗೆ ಒಬ್ಬರಂತೆ ಪೊಲೀಸ್ ನಿಯೋಜನೆ ಮಾಡಲಿದ್ದು, ರಸ್ತೆ ಪಕ್ಕದಲ್ಲಿರುವ ಅಂಗಡಿ ಮುಂಗಟ್ಟುಗಳು ಬಂದ್ ಆಗಲಿವೆ. ಜತೆಗೆ ಈಗಾಗಲೇ ರಸ್ತೆಯ ಒಂದು ಭಾಗಕ್ಕೆ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದು ಪ್ರತಿ ಬಿಲ್ಡಿಂಗ್ನಲ್ಲೂ ಪೊಲೀಸರು ನಿಂತು ಹದ್ದಿನ ಕಣ್ಣಿಡಲಿದ್ದಾರೆ.
ಪ್ರಧಾನಿ ಸೇರಿ ಗಣ್ಯ ವ್ಯಕ್ತಿಗಳು ನಗರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕಾಗಿ ಸೂಕ್ತ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ. ಏ.29 ರ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 7:30 ರ ವರೆಗೂ ಪರ್ಯಾಯ ರಸ್ತೆಗಳನ್ನು ಬಳಸಲು ಪೊಲೀಸರು ಕೋರಿದ್ದಾರೆ.
ಇದನ್ನೂ ಓಧಿ: ತಮಿಳುನಾಡಿನಲ್ಲಿ ಬಾಂಬ್ ಎಸೆದು ಬಿಜೆಪಿ ಮುಖಂಡನ ಹತ್ಯೆ!
ವಾಹನ ಸಂಚಾರ ನಿರ್ಬಂಧ
ಹಳೆ ವಿಮಾನ ನಿಲ್ದಾಣ ರಸ್ತೆ, ಕೇಂಬ್ರಿಡ್ಜ್ ಲೇಔಟ್ ರಸ್ತೆ, ಕಬ್ಬನ್ ರಸ್ತೆ, ಡಿಕನ್ಸನ್ ರಸ್ತೆ, ಅಂಬೇಡ್ಕರ್ ರಸ್ತೆ, ಲಾಲ್ ಬಾಗ್ ವೆಸ್ಟ್ ಗೇಟ್ ರಸ್ತೆ, ನೃಪತುಂಗ ರಸ್ತೆ, ಕೆ.ಆರ್ ಸರ್ಕಲ್, ಕೃಂಬಿಗಲ್ ರಸ್ತೆ, ಆರ್.ವಿ ಕಾಲೇಜ್ ರಸ್ತೆ, ದೇವಾಂಗ ರಸ್ತೆ, ಲಾಲ್ ಬಾಗ್ ಮುಖ್ಯ ರಸ್ತೆ, ಬಸವನಗುಡಿ ೫೦ ಅಡಿ ಕೆನರಾ ಬ್ಯಾಂಕ್ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ
ಮಾಗಡಿ ಕಡೆಯಿಂದ ಬೆಂಗಳೂರು ನಗರದ ಕಡೆಗೆ ಬರುವ ವಾಹನಗಳು ತಾವರೆಕೆರೆ ಜಂಕ್ಷನ್ನಲ್ಲಿ ಬಲತಿರುವು ಪಡೆದು ಹೆಮ್ಮಿಗೆಪುರ-ಕೊಮ್ಮಘಟ್ಟ ಕೆಂಗೇರಿ ಮೂಲಕ ಮೈಸೂರು ರಸ್ತೆಗೆ ಸಂಚರಿಸಬಹುದಾಗಿದೆ. ಮಾಗಡಿ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳು ತಾವರೆಕೆರೆ ಜಂಕ್ಷನ್ನಲ್ಲಿ ಎಡತಿರುವು ಪಡೆದು ಸೊಂಡೇಕೊಪ್ಪ-ನೆಲಮಂಗಲ ಮೂಲಕ ಸಂಚರಿಸಬಹುದಾಗಿರುತ್ತದೆ.
ತುಮಕೂರು ಕಡೆಯಿಂದ ಬಂದು ನೈಸ್ ರಸ್ತೆಯಲ್ಲಿ ಸಂಚರಿಸುವ ಸರಕು ವಾಹನಗಳು ನೆಲಮಂಗಲ ಸೊಂಡೇಕೊಪ್ಪ ಬೈಪಾಸ್ನಲ್ಲಿ ಬಲತಿರುವು ಪಡೆದು ಸೊಂಡೇಕೊಪ್ಪ ತಾವರೆಕೆರೆ – ಹೆಮ್ಮಿಗೆಪುರ-ಕೊಮ್ಮಘಟ್ಟ ಕೆಂಗೇರಿ ಮೂಲಕ ಮೈಸೂರು ರಸ್ತೆಗೆ ಸಂಚರಿಸಬಹುದಾಗಿದೆ. ನಗರದ ಒಳಭಾಗದಿಂದ ಮಾಗಡಿ ಕಡೆಗೆ ಸಂಚರಿಸುವ ವಾಹನಗಳು ಎಂ.ಸಿ ಸರ್ಕಲ್ನಲ್ಲಿ ಎಡತಿರುವು ಪಡೆದು ಮೈಸೂರು ರಸ್ತೆ ಕೆಂಗೇರಿ ಕೊಮ್ಮಘಟ್ಟ – ಹೆಮ್ಮಿಗೆಪುರ-ತಾವರೆಕೆರೆ ಮೂಲಕ ಸಂಚರಿಸಬಹುದಾಗಿದೆ.
ನಾಯಂಡಹಳ್ಳಿ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಬರುವ ವಾಹನಗಳು ನಾಯಂಡಹಳ್ಳಿ ಜಂಕ್ಷನ್ನಲ್ಲಿ ಮೈಸೂರು ರಸ್ತೆಗೆ ಚಲಿಸಿ ಕೆಂಗೇರಿ ಆರ್.ಆರ್ ಕಾಲೇಜು ಮೂಲಕ ರಾಮೋಹಳ್ಳಿ, ಚಂದ್ರಪ್ಪ ಸರ್ಕಲ್ ತಾವರೆಕೆರೆ ಮೂಲಕ ಮಾಗಡಿ ರಸ್ತೆ ಮತ್ತು ತುಮಕೂರು ರಸ್ತೆಗೆ ಸಂಚರಿಸಬಹುದಾಗಿದೆ.
ಸಿ.ಎಂ.ಟಿ.ಐ ಜಂಕ್ಷನ್ನಿಂದ ನಾಯಂಡಹಳ್ಳಿ ಮೈಸೂರು ರಸ್ತೆ ಕಡೆಗೆ ಹೋಗುವ ವಾಹನಗಳು ಗೊರಗುಂಟೆಪಾಳ್ಯ ವೆಸ್ಟ್ ಆಫ್ ಕಾರ್ಡ್ ರಸ್ತೆ ಎಂ.ಸಿ ಸರ್ಕಲ್ ವಿಜಯನಗರ ಮೂಲಕ ಮೈಸೂರು ರಸ್ತೆಗೆ ಸಂಚರಿಸಬಹುದಾಗಿದೆ. ಹಳೇ ರಿಂಗ್ ರಸ್ತೆಯಲ್ಲಿ ಕೆಂಗೇರಿ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಬರುವ ವಾಹನಗಳು ಉಲ್ಲಾಳ ಜಂಕ್ಷನ್ನಲ್ಲಿ ಎಡತಿರುವು ಪಡೆದು ಉಲ್ಲಾಳ ವಿಲೇಜ್, ರಾಮಸಂದ್ರ ಬ್ರಿಡ್ಜ್-ಹೆಮ್ಮಿಗೆಪುರ ತಾವರೆಕೆರೆ ಮೂಲಕ ತುಮಕೂರು ರಸ್ತೆಗೆ ಸಂಚರಿಸಬಹುದಾಗಿದೆ.