ನವದೆಹಲಿ: ಒಂದು ವಾರದ ಹಿಂದೆ ಅಂದರೆ ಫೆ. 6ರ ಬೆಳಗಿನ ಜಾವ ಭಾರಿ ಭೂಕಂಪಕ್ಕೆ ಒಳಗಾದ ಟರ್ಕಿ-ಸಿರಿಯಾ ಆಮೇಲೆ ಸರಣಿ ಭೂಕಂಪನಗಳಿಗೆ ತುತ್ತಾಗಿ, ಬಹಳ ಸಾವು-ನೋವು ಸಂಭವಿಸಿತ್ತು. ಭೂಕಂಪನಗಳು ಸಂಭವಿಸಿ ಒಂದು ವಾರ ಕಳೆದರೂ ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದು ಭೂಕಂಪದ ತೀವ್ರತೆ ಹಾಗೂ ಅದು ಉಂಟುಮಾಡಿದ ಸಾವು-ನೋವು ಮತ್ತು ಹಾನಿಗಳಿಗೆ ನಿದರ್ಶನವಾಗಿದೆ.
ವಿಶೇಷವೆಂದರೆ ಭೂಕಂಪದ ಅವಶೇಷಗಳ ನಡುವೆ ಸಿಲುಕಿ ನೂರಾರು ಗಂಟೆಗಳ ಕಾಲ ನರಳಿದ, ಅಂದರೆ ದುರಂತ ಸಂಭವಿಸಿದ ಒಂದು ವಾರದ ಬಳಿಕವೂ ಕೆಲವರು ಜೀವಂತ ರಕ್ಷಿಸಲ್ಪಟ್ಟಿದ್ದಾರೆ. ಹಾಗೆಯೇ ನಿನ್ನೆ ಇಬ್ಬರು ಸಹೋದರರು ಜೀವಂತ ರಕ್ಷಿಸಲ್ಪಟ್ಟಿದ್ದಾರೆ.
ಅಬ್ದುಲ್ಬಕಿ ಯೆನಿನಾರ್ (21) ಹಾಗೂ ಮುಹಮ್ಮದ್ ಎನೆಸ್ ಯೆನಿನಾರ್ (17) ಎಂಬ ಸಹೋದರರನ್ನು ಟರ್ಕಿಯ ಕಹ್ರಾಮನ್ಮರಾಸ್ನಲ್ಲಿನ ಕುಸಿದ ಅಪಾರ್ಟ್ಮೆಂಟ್ನ ಮೆಟಲ್-ಕಾಂಕ್ರೀಟ್ಗಳ ಅವಶೇಷಗಳಡಿಯಿಂದ ನಿನ್ನೆ ರಕ್ಷಣೆ ಮಾಡಿದ್ದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಹೀಗೆ ಸುಮಾರು 200 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿ ಜೀವನ್ಮರಣ ಹೋರಾಟದಲ್ಲಿದ್ದ ಈ ಸಹೋದರರು ತಮ್ಮದೇ ಮೂತ್ರ ಕುಡಿದು ಹಾಗೂ ಪ್ರೊಟೀನ್ ಪೌಡರ್ ತಿಂದು ಪ್ರಾಣ ಉಳಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.
ಒಂದೆಡೆ ಭೂಕಂಪದಿಂದ ಸತ್ತವರ ಸಂಖ್ಯೆ 41 ಸಾವಿರ ದಾಟಿದ್ದು, ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಅಲ್ಲದೆ ಜೀವ ಬಿಗಿಹಿಡಿದು ರಕ್ಷಣೆಗಾಗಿ ಎದುರು ನೋಡುತ್ತಿರುವವರೂ ಇನ್ನೊಂದಷ್ಟು ಜನ ಇರಬಹುದು ಎಂದೂ ಹೇಳಲಾಗುತ್ತಿದೆ.
ಟರ್ಕಿಯಲ್ಲೀಗ ಇದು ಹಿಂದೆಂದಿಗಿಂತಲೂ ಭಯಂಕರ ಭೂಕಂಪ; ಸತ್ತವರ ಸಂಖ್ಯೆ 33 ಸಾವಿರಕ್ಕೂ ಅಧಿಕ
ಕೋವಿಡ್ ತಡೆಯುವಲ್ಲಿ ಮಾಸ್ಕ್ ನಿಜಕ್ಕೂ ಪರಿಣಾಮ ಬೀರಿದೆಯಾ?: ಇಲ್ಲಿದೆ ಅಧ್ಯಯನವೊಂದರ ಮಾಹಿತಿ