ನವದೆಹಲಿ: ಲಂಡನ್ನಲ್ಲಿರುವ ಹೈಕಮಿಷನ್ನಲ್ಲಿ ಖಾಲಿಸ್ತಾನ್ ಪರ ಘೋಷಣೆಗಳನ್ನು ಕೂಗಿದ ಜನರ ಗುಂಪು ಭಾರತದ ರಾಷ್ಟ್ರಧ್ವಜ ವನ್ನು ಕೆಳಗಿಳಿಸಿದ ಕೆಲವೇ ಗಂಟೆಗಳಲ್ಲಿ, ಭಾರತ ಸರ್ಕಾರವು ಭಾನುವಾರ ಬ್ರಿಟನ್ನ “ಅತ್ಯಂತ ಹಿರಿಯ” ರಾಜತಾಂತ್ರಿಕರನ್ನು ಕರೆಸಿ ತೀವ್ರವಾಗಿ ತನ್ನ ಪ್ರತಿಭಟನೆಯನ್ನು ಪ್ರದರ್ಶಿಸಿತು.
ಭಾರತದಲ್ಲಿನ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರು ಖಲಿಸ್ತಾನ್ ಪರ ಗುಂಪಿನ ಕ್ರಮಗಳನ್ನು ಖಂಡಿಸಿದ್ದು “ನಾನು @HCI_London ನ ಜನರು ಮತ್ತು ಆವರಣದ ವಿರುದ್ಧ ಇಂದು ನಡೆದ ಅವಮಾನಕರ ಕೃತ್ಯಗಳನ್ನು ಖಂಡಿಸುತ್ತೇನೆ. ಇದು ಸ್ವೀಕಾರಾರ್ಹವಲ್ಲ” ಎಂದು ಅವರು ಟ್ವೀಟ್ ಮಾಡಿದ್ದಾರೆ.
I condemn the disgraceful acts today against the people and premises of the @HCI_London – totally unacceptable.
— Alex Ellis (@AlexWEllis) March 19, 2023
ಇದನ್ನೂ ಓದಿ: ಯುವಕನನ್ನು ಕೊಂದು 8 ತುಂಡಾಗಿಸಿ, ಹತ್ಯೆಯ ವಿಡಿಯೋ ಪಾಕಿಸ್ತಾನಕ್ಕೆ ಕಳಿಸಿದ್ರು!
ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ವಿರುದ್ಧ ಪ್ರತ್ಯೇಕತಾವಾದಿ ಮತ್ತು ಉಗ್ರ ಹಿನ್ನೆಲೆ ಉಳ್ಳವರು ಹಿಂದಿನ ದಿನ ಕೈಗೊಂಡ ಕ್ರಮಗಳಿಗೆ ಭಾರತದ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಲು ನವದೆಹಲಿಯಲ್ಲಿರುವ ಯುಕೆ ಹಿರಿಯ ರಾಜತಾಂತ್ರಿಕರನ್ನು ಇಂದು ಸಂಜೆ ತಡವಾಗಿ ಕರೆಸಲಾಯಿತು” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಖಲಿಸ್ತಾನಿ- ಅರ್ಬನ್ ನಕ್ಸಲರ ಕೈವಾಡ
ಈ ಸಂದರ್ಭ “ಬ್ರಿಟನ್ನಲ್ಲಿರುವ ಭಾರತದ ಹೈಕಮಿಷನ್ಗೆ ನೀಡಬೇಕಿದ್ದ ಬ್ರಿಟಿಷ್ ಭದ್ರತೆಯ ಸಂಪೂರ್ಣ ಅನುಪಸ್ಥಿತಿಯ ಬಗ್ಗೆ ವಿವರಣೆಯನ್ನು ಕೋರಲಾಯಿತು. ಭಾರತದ ಸ್ವಾಯತ್ತತೆಯನ್ನು ಪ್ರಶ್ನಿಸುವ ಖಲಿಸ್ತಾನಿಗಳನ್ನು ಹೈಕಮಿಷನ್ ಆವರಣಕ್ಕೆ ಪ್ರವೇಶಿಸಲು ಹೇಗೆ ಅವಕಾಶ ಮಾಡಿಕೊಡಲಾಗಿದೆ ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ. ವಿಯೆನ್ನಾ ಕನ್ವೆನ್ಷನ್ ಅಡಿಯಲ್ಲಿ ಯುಕೆ ಸರ್ಕಾರದ ಮೂಲಭೂತ ಕಟ್ಟುಪಾಡುಗಳ ಬಗ್ಗೆ ಅವರು [ಉಪ ಹೈ ಕಮಿಷನರ್ ಕ್ರಿಸ್ಟಿನಾ ಸ್ಕಾಟ್] ಅವರಿಗೆ ನೆನಪಿಸಲಾಯಿತು, ”ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ.
“ಬ್ರಿಟನ್ನಲ್ಲಿನ ಭಾರತೀಯ ರಾಜತಾಂತ್ರಿಕ ಕಟ್ಟಡಗಳು ಮತ್ತು ಸಿಬ್ಬಂದಿಗಳ ಭದ್ರತೆಗೆ ಬ್ರಿಟನ್ ಸರ್ಕಾರದ ಉದಾಸೀನತೆಯನ್ನು ಭಾರತ ಒಪ್ಪುವುದಿಲ್ಲ. ಯುಕೆ ಸರ್ಕಾರವು ಪ್ರತಿಯೊಬ್ಬರನ್ನು ಗುರುತಿಸಲು, ಬಂಧಿಸಲು ಮತ್ತು ಕಾನೂನು ಕ್ರಮ ಜರುಗಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ. ಇಂದಿನ ಘಟನೆ ಮತ್ತೊಮ್ಮೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ವಿದೇಶಾಂಗ ಮಂತ್ರಿ ಎಸ್ ಜೈ ಶಂಕರ್ ಹೇಳಿದರು. (ಏಜೆನ್ಸೀಸ್)