ಬೆಂಗಳೂರು: ಮಾನವನ ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಕಳೆದ 10 ವರ್ಷಗಳಿಂದ ನರ ಹಾಗೂ ಮಾನಸಿಕ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳ ಹೆಚ್ಚಿಸಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದರು.
ಬೆಂಗಳೂರಿನಲ್ಲಿ ನಿಮ್ಹಾನ್ಸ್ ನೇತೃತ್ವದಲ್ಲಿ ನಡೆಯುತ್ತಿರುವ ಬ್ರೈನ್ ಹೆಲ್ತ್ ಇನಿಷೆಯೇಟಿವ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ನಾವು ಎಷ್ಟು ವರ್ಷ ಬದುಕುತ್ತೇವೆ? ಅನ್ನುವುದರ ಜತೆಗೆ ಹೇಗೆ ಬದುಕುತ್ತೇವೆ ಅನ್ನುವುದೂ ಮುಖ್ಯ. ಮಾನಸಿಕ ಆರೋಗ್ಯದಲ್ಲಿನ ಏರುಪೇರು ಮನುಷ್ಯನ ಆರೋಗ್ಯದಲ್ಲಿ ಸಮಸ್ಯೆ ಸೃಷ್ಟಿಸುವ ಜತೆಗೆ ಸಮಾಜಕ್ಕೂ ಆತಂಕ ತರುತ್ತಿದೆ. ಪ್ರತಿಯೊಬ್ಬರ ಮಾನಸಿಕ ಆರೋಗ್ಯ ಸುಸ್ಥಿತಿಯಲ್ಲಿರುವುದು ಮುಖ್ಯ ಎಂದರು.
ಬೆಂಗಳೂರಿನಲ್ಲಿ ನಿಮ್ಹಾನ್ಸ್ನಂತಹ ಸಂಸ್ಥೆ ಇರುವುದು ನಮ್ಮ ರಾಜ್ಯದ ಸೌಭಾಗ್ಯ. ಸಾಂಕ್ರಾಮಿಕವಲ್ಲದ ರೋಗಗಳಿಂದಲೂ ಬ್ರೈನ್ಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತಿವೆ. ಕಳೆದ 10 ವರ್ಷಗಳಿಂದ ಮಾನಸಿಕ, ನರರೋಗಗಳು, ಸ್ಟ್ರೋಕ್, ತಲೆನೋವಿನಿಂದ ನರಳುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಂಕಿ-ಅಂಶಗಳ ಪ್ರಕಾರ ಮಾನಸಿಕ ಅರೋಗ್ಯದಿಂದಲೇ ಶೇ.7ರಿಂದ8 ಜನರು ಸಾವಿಗೀಡಾಗುತ್ತಿದ್ದು, ಇದು ಸಾವಿಗೆ ಕಾರಣವಾಗಿರುವ ಅಂಶಗಳ ಪೈಕಿ 2ನೇ ಸ್ಥಾನ ಪಡೆದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಭಾರತ ಸರ್ಕಾರ T- MANAS ಮೂಲಕ ಮಾನಸಿಕ ರೋಗಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಅಭಿಯಾನ ಮಾಡುತ್ತಿದೆ. ರಾಜ್ಯ ಸರ್ಕಾರ ಹಬ್ – ಸ್ಪೋಕ್ ಮಾಡೆಲ್ ಮೂಲಕ ಈಗಾಗಲೇ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲಿ ನಿಮ್ಹಾನ್ಸ್ ನೆರವಿನೊಂದಿಗೆ ಪೈಲಟ್ ಪ್ರಾಜೆಕ್ಟ್ ಮಾಡುತ್ತಿದೆ. ಇದನ್ನು ಮುಂದಿನ ದಿನಗಳಲ್ಲಿ ಈ ಸೇವೆ ರಾಜ್ಯದ ಎಲ್ಲ ಕಡೆ ಸಿಗುವಂತೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಮಾನಸಿಕ ರೋಗಿಗಳಿಗೆ ಕೌನ್ಸೆಲಿಂಗ್ ಹಾಗೂ ಚಿಕಿತ್ಸೆ ನೀಡುವ ಬಗ್ಗೆ ಪಿಎಚ್ಸಿ ವೈದ್ಯರಿಗೆ ಈಗಾಗಲೇ 3 ತಿಂಗಳ ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಎನ್ಎಂ, ಸಿಎಚ್ಒಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೂ ಈ ಸಂಬಂಧ ತರಬೇತಿ ನೀಡಿ ಮಾನಸಿಕ ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂಬುದರ ಕುರಿತು ತಿಳಿಸಲು ಯೋಜನೆ ರೂಪಿಸಲಾಗಿದೆ ಎಂದು ಸಚಿವರು ತಿಳಿಸಿದರು.