ಚಂಡೀಗಢ: ಹೊಸ ಕೃಷಿ ಕಾನೂನು ಹಿಂಪಡೆಯದೇ ಹೋದರೆ ನನಗೆ ಸಿಕ್ಕ ಖೇಲ್ ರತ್ನ ಪುರಸ್ಕಾರವನ್ನು ಸರ್ಕಾರಕ್ಕೇ ಹಿಂದಿರುಗಿಸುವೆ ಎಂದು ಬಾಕ್ಸರ್ ವಿಜೇಂದರ್ ಸಿಂಗ್ ಭಾನುವಾರ ಬೆದರಿಕೆ ಹಾಕಿದ್ದಾರೆ. ಖೇಲ್ ರತ್ನ ಎಂಬುದು ದೇಶದ ಅತ್ಯುನ್ನತ ಕ್ರೀಡಾ ಪುರಸ್ಕಾರವಾಗಿದೆ.
ಸಿಂಘು ಬಾರ್ಡರ್ ಸಮೀಪ ಪ್ರತಿಭಟನೆ ನಡೆಸುತ್ತಿದ್ದ ರೈತ ಸಮುದಾಯದ ಪರವಹಿಸಿಕೊಂಡು ಮಾತನಾಡಿದ ವಿಜೇಂದರ್ ಸಿಂಗ್, ಸರ್ಕಾರ ಒಂದೊಮ್ಮೆ ಕರಾಳ ಕೃಷಿ ಕಾನೂನು ವಾಪಸ್ ಪಡೆಯದೇ ಹೋದರೆ, ನನಗೆ ಅವರು ಈ ಹಿಂದೆ ನೀಡಿದ್ದ ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕಾರವನ್ನು ಹಿಂಪಡೆಯುವಂತೆ ಕೇಳಿಕೊಳ್ಳುವುದಾಗಿ ಘೋಷಿಸಿದರು.
ಇದನ್ನೂ ಓದಿ: ಮತ್ತೊಂದು ಬೈರಮಂಗಲ ಆಗಲಿದೆ ಬಿಡದಿ: ತ್ಯಾಜ್ಯ ವಿದ್ಯುತ್ ಘಟಕ ಕೈಬಿಡಿ, ಮಾಜಿ ಶಾಸಕ ಬಾಲಕೃಷ್ಣ ಒತ್ತಾಯ
ಹರಿಯಾಣದ ಮೂವತ್ತೈದು ವರ್ಷ ವಯಸ್ಸಿನ ಬಾಕ್ಸರ್ ಈ ಘೋಷಣೆಯೊಂದಿಗೆ ಇದಕ್ಕೂ ಮೊದಲು ರೈತರಿಗೆ ಬೆಂಬಲ ಸೂಚಿಸಿದ ಕ್ರೀಡಾ ತಾರೆಯರ ಪಟ್ಟಿ ಸೇರಿದ್ದಾರೆ. ದೆಹಲಿಯ ಗಡಿಭಾಗದಲ್ಲಿ ಕಳೆದ ಒಂದು ವಾರದಿಂದ ಪಂಜಾಬ್ ಮತ್ತು ಹರಿಯಾಣದ ರೈತರು ಪ್ರತಿಭಟನೆ ನಡೆಸುತ್ತಿದ್ದು, ರಾಜಧಾನಿಗೆ ಮುತ್ತಿಗೆ ಹಾಕುವುದಾಗಿಯೂ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಪ್ರತಿಭಟನೆ ತೀವ್ರಗೊಳಿಸಿರುವ ಅವರು ಡಿಸೆಂಬರ್ 8 ಕ್ಕೆ ಭಾರತ್ ಬಂದ್ಗೂ ಕರೆ ನೀಡಿದ್ದಾರೆ. (ಏಜೆನ್ಸೀಸ್)