ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ರಿಷಭ್ ಪಂತ್ ಪಡೆಯೂ ಗೆಲುವಿನ ನಗೆ ಬೀರಿದ್ದು, ಪಾಯಿಂಟ್ಸ್ ಟೇಬಲ್ನಲ್ಲಿ 5ನೇ ಸ್ಥಾನಕ್ಕೇರಿದೆ. ಇನ್ನೂ ಪಂದ್ಯದಲ್ಲಿ ರಾಜಸ್ಥಾನ ನಾಯಕ ಸಂಜು ಸ್ಯಾಮ್ಸನ್ ಔಟಾದ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಮೂರನೇ ಅಂಪೈರ್ ನಿರ್ಧಾರಕ್ಕೆ ಹಲವರು ಕಿಡಿಕಾರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, ತಂತ್ರಜ್ಞಾನದ ಸರಿಯಾದ ಬಳಕೆಯ ಕೊರತೆಯನ್ನು ಇಲ್ಲಿ ನೋಡಬಹುದಾಗಿದೆ. ಮೂರನೇ ಅಂಪೈರ್ ಸರಿಯಾದ ತೀರ್ಪು ಕೊಡುವಲ್ಲಿ ವಿಫಲರಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ ಎಂದು ಕಿಡಿಕಾರಿದ್ದಾರೆ.
ಖಾಸಗಿ ಸುದ್ದಿ ವಾಹಿನಿ ಒಂದರಲ್ಲಿ ಈ ಕುರಿತು ಮಾತನಾಡಿದ ನವಜೋತ್, ಸಂಜು ಸ್ಯಾಮ್ಸನ್ ಔಟಾದ ಬಳಿಕ ಪಂದ್ಯದ ದಿಕ್ಕೆ ಬದಲಾಯಿತು ಎಂದು ಹೇಳಬಲ್ಲೆ. ನಾನು ಗಮನಿಸಿದ ಪ್ರಕಾರ ಸಂಜು ಸ್ಯಾಮ್ಸನ್ ಕ್ಯಾಚ್ ಹಿಡಿದ ಆಟಗಾರನ ಕಾಲು ಎರಡು ಬಾರಿ ಬೌಂಡರಿ ಲೈನ್ಗೆ ತಾಗಿರುವುದನ್ನು ಸ್ಪಷ್ಟವಾಗಿ ಗಮನಿಸಿದೆ. ಇಲ್ಲಿ ಮೂರನೇ ಅಂಪೈರ್ ತಂತ್ರಜ್ಞಾನದ ಸರಿಯಾದ ಬಳಕೆ ಮಾಡಿಕೊಳ್ಳದಿರುವುದು ಸ್ಪಷ್ಟವಾಗಿ ಗೋಚರಿಸಿದೆ ಎಂದು ಹೇಳಿದ್ದಾರೆ.
ಸಂಜು ಸ್ಯಾಮ್ಸನ್ಗೆ ದಂಡ
ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಸ್ಯಾಮ್ಸನ್ 16ನೇ ಓವರ್ನ 4ನೇ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ್ದರು. ಈ ವೇಳೆ ಕ್ಯಾಚ್ ಹಿಡಿದ ಶಾಯ್ ಹೋಪ್ ಅವರ ಕಾಲು ಬೌಂಡರಿ ಲೈನ್ಗೆ ತಗುಲಿದೆಯಾ ಎಂದು ಟಿವಿ ಅಂಪೈರ್ ಪರಿಶೀಲಿಸಿ ಔಟ್ ತೀರ್ಪು ನೀಡಿದ್ದರು. ಈ ತೀರ್ಪನ್ನು ಮರು ಪರಿಶೀಲಿಸುವಂತೆ ಸಂಜು ಸ್ಯಾಮ್ಸನ್ ಫೀಲ್ಡ್ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದರು. ಇದು ಐಪಿಎಲ್ನ ನೀತಿ ಸಂಹಿತೆಯ ಅಡಿಯಲ್ಲಿ ಮೊದಲ ಹಂತದ ಅಪರಾಧವಾಗಿದೆ. ಅಲ್ಲದೆ ನೀತಿ ಸಂಹಿತೆಯ ಉಲ್ಲಂಘನೆಗಾಗಿ ಇದೀಗ ಸಂಜು ಸ್ಯಾಮ್ಸನ್ಗೆ ಪಂದ್ಯ ಶುಲ್ಕದ ಶೇ.30 ರಷ್ಟು ದಂಡ ವಿಧಿಸಲಾಗಿದೆ.