ಕೊಟ್ಟೂರು: ತಾಲೂಕಿನ ಬೋರನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ರೈತ ಮೂಗಪ್ಪ ಎಂಬುವರ ಎರಡು ಎಕರೆ ಜಮೀನು ಮೇಲೆ ಕಾಡು ಹಂದಿಗಳ ಹಿಂಡು ದಾಳಿ ಮಾಡಿ ಮೆಕ್ಕೆಜೋಳ ತೆನೆ ತಿಂದು ಹಾಳು ಮಾಡಿವೆ. ಇದುವರೆಗೆ ಕಾಡಿನ ಸಮೀಪದ ಹೊಲಗಳಿಗೆ ನುಗ್ಗುತ್ತಿದ್ದವು. ಈಗ ಊರುಗಳ ಸಮೀಪದ ಮೆಕ್ಕೆಜೋಳದ ಜಮೀನುಗಳ ಮೇಲೆ ದಾಳಿ ಮಾಡುತ್ತಿರುವುದು ರೈತರನ್ನು ಆತಂಕಕ್ಕೀಡು ಮಾಡಿದೆ. 10-15 ಹಂದಿಗಳ ಹಿಂಡು ದಾಳಿ ಮಾಡುತ್ತಿದ್ದು, ಹೆದರಿಸಲು ಪ್ರಯತ್ನಿಸಿದವರ ಮೇಲೆಯೂ ಎರಗುತ್ತವೆ. ಹೀಗಾಗಿ ರೈತರು ರಾತ್ರಿ ವೇಳೆ ಹೊಲಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಈ ಕುರಿತು ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.