ಕಠ್ಮಂಡು: ಗಡಿ ವಿಷಯದಲ್ಲಿ ಭಾರತ ಸರ್ಕಾರ ನೇಪಾಳಕ್ಕೆ ಮೋಸ ಮಾಡಿದೆ ಎಂದು ನೇರವಾಗಿ ಆರೋಪಿಸಿರುವ ಪ್ರಧಾನಿ ಕೆ.ಪಿ. ಶರ್ಮಾ ಒಲಿ, ಭಾರತ ವಶಪಡಿಸಿಕೊಂಡಿರುವ ಪ್ರದೇಶಗಳನ್ನು ವಾಪಸ್ ಪಡೆದೇ ಸಿದ್ಧ ಎನ್ನುವ ಮೂಲಕ ಸಂಘರ್ಷದ ಮುನ್ಸೂಚನೆ ನೀಡಿದ್ದಾರೆ.
ಸಂಸತ್ನಲ್ಲಿ ವಾರ್ಷಿಕ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ‘‘ಕಾಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರಾ ಪ್ರದೇಶಗಳನ್ನು ಪುನಃ ಪಡೆಯಲು ನೇಪಾಳ ನಿರ್ಧರಿಸಿದೆ. ಈ ವಿಷಯದಲ್ಲಿ ಇಡೀ ನೇಪಾಳ ಒಂದಾಗಿದೆ. ಈ ಪ್ರದೇಶಗಳನ್ನು ಭಾರತ ವಶಪಡಿಸಿಕೊಂಡು ತನ್ನ ನಕ್ಷೆಯಲ್ಲಿ ನಮೂದಿಸಿದೆ’’ ಎಂದು ಭಾರತದ ವಿರುದ್ಧ ಹರಿಹಾಯ್ದಿದ್ದಾರೆ.
ಇದನ್ನೂ ಓದಿ: ಕಾಶ್ಮೀರಿ ಯುವಕರಿಗೆ ಪಾಕ್ನ ವಿದ್ಯಾರ್ಥಿವೇತನ, ಭದ್ರತಾಪಡೆಗಳ ಹದ್ದಿನಕಣ್ಣು
‘‘ನಮಗೆ ಸುಳ್ಳುಸುಳ್ಳೇ ಕಾಳಿ ನದಿಯನ್ನು ತೋರಿಸಿ ನಮ್ಮ ಭೂಪ್ರದೇಶಗಳನ್ನು ವಶಪಡಿಸಿಕೊಂಡಿರುವ ಭಾರತ ಈಗ ಅದು ತನ್ನದೆಂದು ವಾದಿಸುತ್ತಿದೆ. ಜತೆಗೆ ಅಲ್ಲಿ ಸೇನೆ ಜಮಾವಣೆ ಮಾಡಿ ಮೋಸ ಮಾಡಿದೆ’’ ಎಂದು ಆರೋಪಿಸಿದರು.
‘‘ಅದಲ್ಲದೆ, ಭಾರತ ಗಡಿಯುದ್ದಕ್ಕೂ ಅಣೆಕಟ್ಟುಗಳನ್ನು ನಿರ್ಮಿಸುತ್ತಿದೆ. ಇದರಿಂದಾಗಿ ನೇಪಾಳ ಭಾಗದಲ್ಲಿ ಅನೇಕ ಭೂಪ್ರದೇಶಗಳು ಮುಳುಗಡೆಯಾಗುತ್ತವೆ. ಭಾರತ ಹೀಗೆ ಮಾಡಲೇಬಾರದು. ಈ ಕುರಿತು ಭಾರತಕ್ಕೆ ಹಲವು ಬಾರಿ ಎಚ್ಚರಿಕೆ ನೀಡಿದ್ದೇವೆ. ಅಂತಹ ಯಾವುದೇ ನಡೆಯನ್ನು ನಾವು ಸಹಿಸುವುದಿಲ್ಲ’’ ಎಂದು ಹೇಳಿದರು.
ಇದನ್ನೂ ಓದಿ: ಜೂನ್ 15ರಿಂದ ಮತ್ತೊಮ್ಮೆ ದೇಶಾದ್ಯಂತ ಸಂಪೂರ್ಣ ಲಾಕ್ಡೌನ್ ; ಇಲ್ಲಿದೆ ಫ್ಯಾಕ್ಟ್ಚೆಕ್
‘‘ಟಿಬೆಟ್ ಮಾಡಿದ ತಪ್ಪನ್ನು ನೇಪಾಳ ಮಾಡಬಾರದು’’ ಎಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರ ಹೇಳಿಕೆ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಪ್ರಧಾನಿ ಒಲಿ, ಈ ಹೇಳಿಕೆಯಿಂದ ನೇಪಾಳದ ಸಾರ್ವಭೌಮತೆಗೆ ಧಕ್ಕೆಯಾಗಿದೆ ಎಂದಿದ್ದಾರೆ.
ಕಳೆದ ಜೂ.3 ರಂದು ನೇಪಾಳ ವಿರುದ್ಧ ಹರಿಹಾಯ್ದಿದ್ದ ಯೋಗಿ ಆದಿತ್ಯನಾಥ್, ಭಾರತ ಮತ್ತು ನೇಪಾಳ ಬೇರೆ ಬೇರೆ ರಾಷ್ಟ್ರಗಳಾಗಿರಬಹುದು. ಆದರೆ ಒಂದೇ ಆತ್ಮವನ್ನು ಹೊಂದಿವೆ. ಹಲವು ಶತಮಾನಗಳಿಂದ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಪೌರಾಣಿಕವಾಗಿ ಉಭಯ ದೇಶಗಳು ಸಂಪರ್ಕ ಬೆಸೆದುಕೊಂಡಿವೆ. ನೇಪಾಳ ಇದನ್ನು ಎಂದಿಗೂ ಮರೆಯಬಾರದು ಎಂದಿದ್ದರು.
ಇದನ್ನೂ ಓದಿ : ಮಹಿಳೆಯರಿಗಿನ್ನು ಹದಿನೆಂಟಲ್ಲ, ಮದುವೆ ವಯಸ್ಸು 21…!
ಈ ನಡುವೆ, ಕಾಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರಾ ಪ್ರದೇಶಗಳನ್ನು ನೇಪಾಳದ ನಕ್ಷೆಯಲ್ಲಿ ಸೇರಿಸುವ ಸಂವಿಧಾನ ತಿದ್ದುಪಡಿ ಮಸೂದೆಗೆ ಅಲ್ಲಿನ ಎಲ್ಲ ಪಕ್ಷಗಳು ಈಗ ಬೆಂಬಲ ವ್ಯಕ್ತಪಡಿಸಿವೆ. ಈ ಮೊದಲು ಮ್ಯಾಡೆಸ್ ಕೇಂದ್ರಿತ ಸಮಾಜವಾದಿ ಪಕ್ಷದ ಸರಿತಾ ಗಿರಿ, ‘‘ವಿವಾದಿತ ಪ್ರದೇಶಗಳು ನೇಪಾಳಕ್ಕೆ ಸೇರಿಲ್ಲ, ಹೀಗಾಗಿ ಮಸೂದೆ ಹಿಂತೆಗೆದುಕೊಳ್ಳಿ’’ ಎಂದು ಆಗ್ರಹಿಸಿದ್ದರು. ಆದರೆ ಅವರಿಗೆ ಅವರ ಪಕ್ಷವೇ ಈ ವಿಷಯದಲ್ಲಿ ಎಚ್ಚರಿಕೆ ನೀಡಿದೆ. ‘‘ಮಸೂದೆಯನ್ನು ಬೆಂಬಲಿಸಿ, ಇಲ್ಲವಾದರೆ ಶಿಸ್ತು ಕ್ರಮ ಎದುರಿಸಿ’’ ಎಂದು ಹೇಳಿದೆ.