ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಬಿಎಂಟಿಸಿ ಬಸ್ಸೊಂದು ಹೊತ್ತಿ ಉರಿದ ಪ್ರಕರಣ ನಡೆದಿದೆ. ಇದರಲ್ಲಿ ನಿರ್ವಾಹಕರೊಬ್ಬರು ಸಜೀವ ದಹನ ಆಗಿರುವ ದಾರುಣ ಘಟನೆ ನಡೆದಿದೆ. ಆದೆರೆ ಇದೀಗ ಈ ಘಟನೆ ನಿಜಕ್ಕೂ ಆಕಸ್ಮಿಕವೋ ಅಥವಾ ಕೊಲೆಯೋ ಎನ್ನುವ ಪ್ರಶ್ನೆ ಎದ್ದುಕೊಂಡಿದೆ. ಈ ಘಟನೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಕೆಎ 57 ಎಫ್ 2069 ನಂಬರಿನ ಸುಮ್ಮನಹಳ್ಳಿ ಡಿಪೋವಿನ ಬಿಎಂಟಿಸಿ ಬಸ್ ನಿನ್ನೆ ಬ್ಯಾಡರಹಳ್ಳಿ ಬಳಿ ಲಿಂಗಧೀರನಹಳ್ಳಿ ಬಸ್ ನಿಲ್ದಾಣಕ್ಕೆ ಬಂದಿದೆ. ಬಸ್ಸಿನ ಚಾಲಕ ಪ್ರಕಾಶ್ ಎಂದಿನಂತೆ ಬಿಎಂಟಿಸಿ ಕೊಟ್ಟಿರೋ ಕೊಠಡಿಯಲ್ಲಿ ಮಲಗಿದ್ದಾರೆ.
ಆದರೆ, ಬಳ್ಳಾರಿ ಮೂಲದ ಮುತ್ತಯ್ಯ ಸ್ವಾಮಿ ಬಸ್ನಲ್ಲೇ ಮಲಗಿದ್ದಾರೆ. ಈ ವೇಳೆ ಬಸ್ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕ್ಷಣಮಾತ್ರದಲ್ಲಿ ಬೆಂಕಿಯ ಕೆನ್ನಾಲಗೆ ಇಡೀ ಬಸ್ಸನ್ನು ವ್ಯಾಪಿಸಿ ಹೊಗೆ ತುಂಬಿದೆ. ಆದರೆ ಗಾಢನಿದ್ರೆಗೆ ಜಾರಿದ್ದ ಮುತ್ತಯ್ಯಸ್ವಾಮಿ ಉಸಿರಾಟದ ಸಮಸ್ಯೆಯಿಂದ ಪ್ರಜ್ಞಾಹೀನ ಸ್ಥಿತಿಯನ್ನು ತಲುಪಿ ಬಸ್ನಲ್ಲೇ ಸುಟ್ಟುಕರಕಲಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸಿಕೊಂಡಿದೆ.
ಇದೀಗ ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ದೌಡಾಯಿಸಿದ್ದಾರೆ. ಅದೇ ರೀತಿ ಬೆಂಕಿಹೊತ್ತಿಕೊಳ್ಳಲು ಕಾರಣವಾದ ಅಂಶವೇನು ಅನ್ನುವುದನ್ನು ಅಗ್ನಿಶಾಮಕ ಅಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ. ಇಂದು ಬೆಳಿಗ್ಗೆ 5 ಗಂಟೆಗೆ ಈ ಬಸ್ಸು ಲಿಂಗಧೀರನಹಳ್ಳಿಯಿಂದ ಈ ಬಸ್ ಕೆ.ಆರ್ ಮಾರ್ಕೆಟ್ ಗೆ ತೆರಳಬೇಕಿತ್ತು. ಇಷ್ಟು ದಿನ ಮೆಜೆಸ್ಟಿಕ್ಗೆ ತೆರಳುತ್ತಿದ್ದ ಬಸ್ಸು ಇವತ್ತಿನ ಮಟ್ಟಿಗೆ ಮಾರ್ಕೆಟ್ಗೆ ರೂಟ್ ಬದಲಿಸಲಾಗಿತ್ತು.
ಶಾರ್ಟ್ ಸರ್ಕ್ಯೂಟಾ ಅಥವಾ ಕೊಲೆಯಾ..?
10:30 ಕ್ಕೆ ಲಿಂಗಧೀರನಹಳ್ಳಿ ಬಸ್ ಸ್ಟಾಪನ್ನ ಬಸ್ ಪ್ರವೇಶಿಸಿದೆ. ಈ ಘಟನೆ ನಡೆದಿದ್ದು ಬೆಳಿಗ್ಗೆ 3 ರಿಂದ 4 ಗಂಟೆಯ ಸುಮಾರಿನಲ್ಲಿ. ಬಸ್ ನಿಂತಿದ್ದ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ಆಗೋದು ತುಂಬಾ ಕಡಿಮೆ. ಒಂದು ವೇಳೆ ಶಾರ್ಟ್ ಸರ್ಕ್ಯೂಟ್ ಆದರೂ ಕೂಡ ಬೆಂಕಿ ನಿಧಾನವಾಗಿಯೇ ಹತ್ತಿಕೊಳ್ಳುತ್ತದೆ. ಯಾವುದೇ ವ್ಯಕ್ತಿ ಮಲಗಿದ್ದರೂ ಹೊಗೆಯಿಂದ ಉಸಿರಾಟದ ಸಮಸ್ಯೆ ಉಂಟಾಗುತ್ತದೆ.
ಹೀಗೆ ಉಸಿರಾಟದ ಸಮಸ್ಯೆ ಕಂಡುಬಂದಾಗ ಸಹಜವಾಗಿ ಎಚ್ಚರವಾಗುತ್ತಾರೆ. ಆದರೆ ಇಲ್ಲಿ ಬಿಎಂಟಿಸಿ ಕಂಡಕ್ಟರ್ ಮುತ್ತಯ್ಯ ಮಾತ್ರ ಮಲಗಿದ್ದಲ್ಲೇ ಮಲಗಿದ್ದಾರೆ. ಹಾಗಾದರೆ ಯಾರೋ ಕೊಲೆಮಾಡಿ ಬಸ್ಸಿಗೆ ಬೆಂಕಿ ಹಚ್ಚಿದ್ದಾರಾ ಎನ್ನುವ ಅನುಮಾನ ಹುಟ್ಟಿದೆ. ಈ ಸಾಧ್ಯತೆಯನ್ನು ಸುಲಭವಾಗಿ ತಳ್ಳಿ ಹಾಕಲಾಗುವುದಿಲ್ಲ.
ವಿಧಿ ವಿಜ್ಞಾನ ಪ್ರಯೋಗಾಲಯದ ರಿಪೋರ್ಟ್ ಬಂದ ತಕ್ಷಣ ಸಾವಿನ ಅಸಲೀ ಸತ್ಯ ಹೊರಬೀಳಿತ್ತೆ. ಅದೇ ರೀತಿ ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ಕಾರಣ ತಿಳಿದುಬರುತ್ತೆ. ಮೈಮೇಲೆ ಬೇರೆ ಗಾಯದ ಗುರಿತು ಇದ್ರೆ ನಿಜಕ್ಕೂ ನಡೆದಿರೋದು ಕೊಲೆ ಅನ್ನೋದು ಪಕ್ಕಾ ಆಗುತ್ತದೆ.