ಬೆಂಗಳೂರು: ಬ್ರೇಕ್ ವಿಫಲಗೊಂಡ ಪರಿಣಾಮ ಬಿಎಂಟಿಸಿ ಬಸ್ ಪಾದಚಾರಿಗಳ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರ ಗಾಯಗೊಂಡಿರುವ ಘಟನೆ ಕೊಟ್ಟಿಗೆಪಾಳ್ಯದಲ್ಲಿ ಸೋಮವಾರ ನಡೆದಿದೆ.
ಬೈಲಪ್ಪ (43) ಹಾಗೂ ವಿಶ್ವಾರಾಧ್ಯ (46) ಮೃತಟ್ಟವರು. ಅಭಿಷೇಕ್, ಹರ್ಷಿತ ಹಾಗೂ ನಾಗರಾಜ್ ಗಂಭೀರ ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿದ್ದಾರೆ.
ಬಸ್ಗೆ ಅವಡಿಸಿದ್ದ ಬ್ರೇಕ್ ವ್ಯವಸ್ಥೆ ಸಮಸ್ಯೆ ಇದೆ ಎಂದು 15 ದಿನಗಳಿಂದ ಚಾಲಕ ವೆಂಕಟೇಶ್ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಹೀಗಿದ್ದರೂ ಅಧಿಕಾರಿಗಳು ಬ್ರೇಕ್ ಸರಿಪಡಿಸಲು ಕ್ರಮ ತೆಗೆದುಕೊಂಡಿರಲಿಲ್ಲ . ಹೀಗಾಗಿ ಅಪಘಾತ ಸಂಭವಿಸಿದೆ.
ತಪ್ಪಿದ ಭಾರಿ ಅನಾಹುತ: ಸುಂಕದಕಟ್ಟೆ ಕಡೆಯಿಂದ ಬರುತ್ತಿದ್ದ ಬಿಎಂಟಿಸಿ ಬಸ್ನ ಬ್ರೇಕ್ ವಿಫಲಗೊಂಡಿತ್ತು. ಬ್ರೇಕ್ ವಿಫಲವಾಗಿ 200 ಮೀಟರ್ ದೂರ ಬಸ್ ಚಲಿಸಿತು. ಎದುರಲ್ಲೇ ಕಾಮಗಾರಿ ನಡೆಯುತ್ತಿತ್ತು. ಬಸ್ನ ಬಲಭಾಗದಲ್ಲಿ ಕಾಮಗಾರಿ ನಡೆಯುತ್ತಿದ್ದರೆ, ಎಡ ಭಾಗದಲ್ಲಿ ದೇವಾಲಯ ಇತ್ತು. ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಜನರು ಬಂದಿದ್ದರು. ಹೀಗಾಗಿ ಚಾಲಕ ವೆಂಕಟೇಶ್ ಜಾಗರೂಕತೆಯಿಂದ ಬಸ್ ಅನ್ನು ಬಲ ಭಾಗಕ್ಕೆ ತಿರುಗಿಸಿ ಕಾಮಗಾರಿ ನಡೆಯುತ್ತಿದ್ದ ಸ್ಥಳದತ್ತ ಚಲಾಯಿಸಿದರು. ಬಸ್ ಎಡಭಾಗಕ್ಕೆ ತಿರುಗಿದ್ದರೇ ಅಧಿಕ ಮಂದಿ ಬಲಿಯಾಗುತ್ತಿದ್ದರು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಬಸ್ ಬ್ರೇಕ್ ವ್ಯವಸ್ಥೆ ತನಿಖೆ: ಬಿಎಂಟಿಸಿ ಬಸ್ನಿಂಸ ಸಂಭವಿಸಿದ ಅಪಘಾತದಿಂದ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ. ಬಸ್ನ ಬ್ರೇಕ್ ವ್ಯವಸ್ಥೆಯನ್ನು ತನಿಖೆ ಮಾಡುವಂತೆ ಆರ್ಟಿಒ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಸ್ಗೆ ಬ್ರೇಕ್ ಸಮಸ್ಯೆ ಇದ್ದದ್ದು ಪತ್ತೆಯಾದರೆ ಡಿಪೋ ಮ್ಯಾನೇಜರ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿದರು.