ಬೆಂಗಳೂರು: ಮಠಾಧಿಪತಿಗಳಾದ ನಾವು ಯಡಿಯೂರಪ್ಪ ಅವರ ಕಣ್ಣೀರನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಬಿಜೆಪಿ ಯಡಿಯೂರಪ್ಪ ಅವರ ಕಣ್ಣೀರಿನಲ್ಲಿ ಕೊಚ್ಚಿ ಹೋಗುತ್ತದೆ ಎಂದು ಬಾಳೆಹೊಸೂರು ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಇದು ಯಡಿಯೂರಪ್ಪ ಅವರ ಕಣ್ಣೀರಲ್ಲ. ಕನ್ನಡ ನಾಡಿನ, ವೀರಶೈವ ಲಿಂಗಾಯತ ಸಮಾಜದ ಕಣ್ಣೀರು. ಯಡಿಯೂರಪ್ಪ ಕಣ್ಣೀರು ಹಾಕಿಲ್ಲ. ರಾಜ್ಯ ಕಣ್ಣೀರು ಹಾಕುತ್ತಿದೆ. ಅದೇ ಕಣ್ಣೀರಲ್ಲಿ ಬಿಜೆಪಿ ತೇಲಿ ಹೋಗುತ್ತದೆ ಎಂದು ಹೇಳಿದರು.
ಇದು ಸಾಧನಾ ಸಮಾವೇಶ ಅಲ್ಲ, ವೇದನಾ ಸಮಾವೇಶ. ಲಿಂಗಾಯರಿಗೆ ಮಾಡಿದ ಅವಮಾನ. ಯಡಿಯೂರಪ್ಪ ಅವರಿಂದಲೂ ಪಕ್ಷ ಕಟ್ಟಿ ಬೆಳೆಸಲು ಸಾಧ್ಯವಾಗದಷ್ಟು ಬಿಜೆಪಿ ಹದಗೆಟ್ಟು ಹೋಗುತ್ತದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ: ಬಿಎಸ್ವೈ ರಾಜೀನಾಮೆ | ಇದು ಕರ್ನಾಟಕದ ದುರ್ದೈವವೇ ಸರಿ: ಸಿದ್ದರಾಮಯ್ಯ
ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ವೇದನೆ ಆಗುವ ಸಂದರ್ಭ ಸೃಷ್ಟಿ ಮಾಡಿದ ನೋವು ನಮಗಿದೆ. ಬಿಜೆಪಿ ನಮ್ಮ ಸಮಾಜವನ್ನು ಬಹಳ ವ್ಯವಸ್ಥಿತವಾಗಿ ಒಡೆಯುವ ಕೆಲಸ ಮಾಡಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದರು.
ಯಡಿಯೂರಪ್ಪ ಅವರನ್ನು ಬ್ಲ್ಯಾಕ್ಮೇಲ್ ಮಾಡುವ ಕೆಲಸ ನಡೆದಿದೆ. ಪಕ್ಷ ಕಟ್ಟಿ ಬೆಳೆಸಿದ ನಾಯಕರಿಗೆ ಇಂತಹ ಕೆಟ್ಟ ಪರಿಸ್ಥಿತಿ ಬರಬಾರದು. ಯಡಿಯೂರಪ್ಪ ಅವರನ್ನು ಮತ್ತೆ ಸಿಎಂ ಸ್ಥಾನದಲ್ಲಿ ಕುಳ್ಳಿರಿಸಬೇಕು. ಇಲ್ಲದೇ ಹೋದರೆ ವೀರಶೈವ ಲಿಂಗಾಯತ ಸಮಾಜ ಬಿಜೆಪಿಗೆ ತಕ್ಕ ಪಾಠ ಕಲಿಸಲಿದೆ ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದರು.
ಅವರಿಬ್ಬರಿಗೆ ಕಣ್ಣೀರು ಬರಲ್ಲ, ಯಡಿಯೂರಪ್ಪ ಅವರಿಗೆ ಕಣ್ಣೀರು ಬಂದಿದ್ದರಲ್ಲಿ ತಪ್ಪಿಲ್ಲ: ಶಾಸಕ ರಘುಪತಿ ಭಟ್