ನವದೆಹಲಿ: ಮುಂಬರುವ ಪಂಚರಾಜ್ಯ, ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಹೆಚ್ಚು ಮತದಾರರನ್ನು ಸೆಳೆಯಲು ಮುಂದಾಗಿರುವ ಬಿಜೆಪಿ ದೇಶಾದ್ಯಂತ 200ಕ್ಕೂ ಹೆಚ್ಚು ಕಾಲ್ ಸೆಂಟರ್ಗಳನ್ನು ತೆರೆಯಲು ಸಿದ್ದತೆ ನಡೆಸಿದೆ. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಮತದಾರರೊಂದಿಗೆ ಸಂಪರ್ಕ ಸಾಧಿಸಲು ಮುಂದಾಗಿದೆ.
ಇದರ ಹೊಣೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಾಗೂ ಸುನೀಲ್ ಬನ್ಸಾಲ್ ಹೊತ್ತಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.
ಕಾಲ್ ಸೆಂಟರ್ಗಳನ್ನು ಪ್ರಾರಂಭಿಸುವ ಕುರಿತು ಪಕ್ಷದ ಕಚೇರಿಯಲ್ಲಿ ಸಭೆ ಕರೆಯಲಾಗಿದ್ದು, ಮುಂಬರುವ ಪಂಚರಾಜ್ಯ ಹಾಗೂ ಲೋಕಸಭೆ ಚುನಾವಣೆ ಮೇಲೆ ಬಿಜೆಪಿ ನಾಯಕರು ಹೆಚ್ಚು ಕೇಂದ್ರಿಕರಿಸಿದ್ದಾರೆ ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಕಾಲ್ ಸೆಂಟರ್ ತೆರೆಯಲು ಉದ್ದೇಶಿಸಲಾಗಿದ್ದು, ಏಕಕಾಲದಲ್ಲಿ 200ಕ್ಕೂ ಹೆಚ್ಚು ಕಡೆ ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ.
ಇದನ್ನೂ ಓದಿ: ನಮ್ಮ ಸಿದ್ದಾಂತಕ್ಕೆ ವಿಶ್ವದಾದ್ಯಂತ ಹೆಚ್ಚಿನ ಬೇಡಿಕೆ ಇದೆ: ಮೋಹನ್ ಭಾಗವತ್
30 ರಾಜ್ಯಗಳನ್ನು ಒಳಗೊಂಡಂತೆ ಏಕಕಾಲದಲ್ಲಿ 200ಕ್ಕೂ ಹೆಚ್ಚು ಕಾಲ್ಸೆಂಟರ್ಗಳನ್ನು ತೆರೆಯಲು ಉದ್ಧೇಶಿಸಲಾಗಿದ್ದು, 20 ಸಾವಿರಕ್ಕೂ ಅಧಿಕ ಮಂದಿ ಕಾರ್ಯನಿರ್ವಹಿಸಲಿದ್ದಾರೆ. ದಿನದ 24 ಘಂಟೆಯೂ ಕಾಲ್ ಸೆಂಟರ್ ಕಾರ್ಯನಿರ್ವಹಿಸಲಿದ್ದು, ಪಕ್ಷದ ವತಿಯಿಂದ ಇದಕ್ಕಾಗಿ ವಿಶೇಷ ವರ್ಕ್ಶಾಪ್ ಒಂದನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾಲ್ ಸೆಂಟರ್ಗಳು ನವೆಂಬರ್ 1ರಿಂದ ಆರಂಭವಾಗಲಿದ್ದು, ಪ್ರತಿ ಕೇಂದ್ರದಲ್ಲಿ 20-22ಮಂದಿ ಕೆಲಸ ಮಾಡಲಿದ್ದಾರೆ. ಈ ಕಾಲ್ ಸೆಂಟರ್ಗಳ ಪ್ರಮುಖ ಗುರಿ ರಾಷ್ಟ್ರೀಯ ಮಟ್ಟದಲ್ಲಿ ಮತದಾರರೊಂದಿಗೆ ಸಂಪರ್ಕ ಸಾಧಿಸುವುದು ಎಂದು ಹೇಳಲಾಗಿದೆ. 2018ರಲ್ಲೂ ಬಿಜೆಪಿ ಈ ರೀತಿಯ ಕಾರ್ಯತಂತರ ಅನುಸರಿಸಿತ್ತು.