ಸಿಂಧನೂರು: ಬಿಜೆಪಿ ಮುಖಂಡರ ಸಹಕಾರದಿಂದ ನನಗೆ ಟಿಕೆಟ್ ಸಿಕ್ಕಿದ್ದು, ಸಿಂಧನೂರು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಾಡುವುದು ಖಚಿತ ಎಂದು ಬಿಜೆಪಿ ಘೋಷಿತ ಅಭ್ಯರ್ಥಿ ಕೆ.ಕರಿಯಪ್ಪ ತಿಳಿಸಿದರು.
ನಗರದ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿದರು. ಬಿಜೆಪಿ ಟಿಕೆಟ್ಗಾಗಿ ನಾನು ಸೇರಿ ನಾಲ್ಕೈದು ಜನ ಆಕಾಂಕ್ಷಿಗಳಿದ್ದೆವು. ಒಂದು ವಾರದಿಂದ ಎಲ್ಲರೂ ಒಗ್ಗಟ್ಟಾಗಿ ಪ್ರಚಾರ ಕೈಗೊಂಡಿದ್ದೇವೆ. ಯಾರಿಗೆ ಟಿಕೆಟ್ ಸಿಕ್ಕರೂ ಒಗ್ಗಟ್ಟಿನಿಂದ ಕೆಲಸ ಮಾಡಲು ನಿರ್ಧರಿಸಿದ್ದೇವೆ. ನನಗೆ ಬಿಜೆಪಿ ಟಿಕೆಟ್ ದೊರೆತಿದೆ. ಬಿಜೆಪಿಯ ಪ್ರಮುಖರ ಮನೆಗಳಿಗೆ ತೆರಳಿ ಆಶೀರ್ವಾದ ಪಡೆದಿರುವೆ. ಕ್ಷೇತ್ರದಲ್ಲಿಯೂ ಬಿಜೆಪಿ ಪರ ಅಲೆ ಇದ್ದು, ಎಲ್ಲರ ಸಹಕಾರದಿಂದ ಗೆಲ್ಲುವ ವಿಶ್ವಾಸ ಇದೆ. ಪಕ್ಷದ ಪ್ರಮುಖರೊಂದಿಗೆ ಚರ್ಚಿಸಿ ನಾಮಪತ್ರವನ್ನು ಯಾವಾಗ ಸಲ್ಲಿಸಬೇಕೆಂಬುದನ್ನು ನಿರ್ಧರಿಸುವೆ. ಎಲ್ಲ ಟಿಕೆಟ್ ಆಕಾಂಕ್ಷಿಗಳು ನಮ್ಮ ಜತೆಗಿದ್ದು, ಯಾವುದೇ ಅಸಮಧಾನಗಳಿಲ್ಲ ಎಂದು ತಿಳಿಸಿದರು. ಮುಖಂಡ ಪರಮೇಶ್ವರಪ್ಪ ದಢೇಸುಗೂರು ಇದ್ದರು.