ಮೂಡಿಗೆರೆ: ಕಾರ್ಯಕರ್ತರ ನಿರಂತರ ಶ್ರಮ ಮತ್ತು ಸಂಘಟನೆಯಿಂದ ಬಿಜೆಪಿ ಇಂದು ದೇಶದೆಲ್ಲೆಡೆ ಅಧಿಕಾರ ಹಿಡಿಯಲು ಸಾಧ್ಯವಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಹೇಳಿದರು.
ರೈತ ಭವನದಲ್ಲಿ ಶನಿವಾರ ತಾಲೂಕು ಬಿಜೆಪಿ ಏರ್ಪಡಿಸಿದ್ದ 2 ದಿನಗಳ ಬಿಜೆಪಿ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡಿದರು. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಹಲವು ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಭಾರತ ವಿಶ್ವ ಗುರುವಿನ ಸ್ಥಾನ ಪಡೆಯುತ್ತಿದೆ. ಕರೊನಾ ಸಂಕಷ್ಟದ ಸಮಯದಲ್ಲಿ ಆತ್ಮ ನಿರ್ಭರ ಜಾರಿಗೆ ತಂದು ಶೋಷಿತ ವರ್ಗಕ್ಕೆ ಆರೋಗ್ಯ, ಆರ್ಥಿಕ, ಸಾಮಾಜಿಕ ಪರಿಸ್ಥಿತಿ ನಿಭಾಯಿಸಲು ಪ್ರೇರಣೆ ನೀಡಿದ್ದಾರೆ ಎಂದು ತಿಳಿಸಿದರು.
ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಪಕ್ಷ ಸಂಘಟನೆ ಮೂಲಕ ದೇಶ ಕಟ್ಟುವ ಕೆಲಸ ಮಾಡಬೇಕು. ಕಾರ್ಯಕರ್ತರು ಶ್ರಮ ವಹಿಸಿ ಪಕ್ಷ ಕಟ್ಟಬೇಕು. ಪಕ್ಷ ನಿಷ್ಠೆ ಬೆಳೆಸಿಕೊಂಡು ಅಧಿಕಾರ ಸಿಕ್ಕಾಗ ಜನಮನ್ನಣೆ ಗಳಿಸಲು ಮುಂದಾಗಬೇಕು ಎಂದರು.