ಕಾರವಾರ: ಕರೊನಾ ರೋಗಿ ಆಸ್ಪತ್ರೆಯಿಂದ ನಾಪತ್ತೆಯಾಗಿ ಆತಂಕ ಮೂಡಿಸಿದ ಘಟನೆ ಸೋಮವಾರ ನಡೆದಿದೆ. ಬೈಕ್ ಕಳ್ಳತನ ಆರೋಪದ ಮೇಲೆ ಶಿರಸಿ ಪೊಲೀಸರಿಂದ ಬಂಧಿತನಾಗಿದ್ದ ಆರೋಪಿಗೆ ಕರೊನಾ ಸೋಂಕು ಭಾನುವಾರ ದೃಢಪಟ್ಟಿತ್ತು. ಇದರಿಂದ ಶಿರಸಿ ನಗರ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿತ್ತು. 6 ಜನ ಪೊಲೀಸರು, ನ್ಯಾಯಾಧೀಶರನ್ನು, ನ್ಯಾಯಾಲಯದ ನಾಲ್ವರು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು.
ಆತನನ್ನು ಕಾರವಾರ ಕ್ರಿಮ್ಸ್ ಕರೊನಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಸೋಮವಾರ ಬೆಳಗಿನಜಾವ ಕಳ್ಳ ಇಬ್ಬರು ಸಹ ರೋಗಿಗಳ ಮೊಬೈಲ್ ಕದ್ದು, ಗ್ಲಾಸ್ ಒಡೆದು ನಾಪತ್ತೆಯಾಗಿದ್ದ. 11 ಗಂಟೆಯ ಬಳಿಕ ಆತನನ್ನು ಕದ್ರಾ ರಸ್ತೆಯಲ್ಲಿ ಸಾಕಳಿ ಬ್ರಿಜ್ ಸಮೀಪ ಬಂಧಿಸಲಾಗಿದೆ. ಆತ ಬಸ್ ನಲ್ಲಿ ಪ್ರಯಾಣ ಬೆಳೆಸಿದ್ದರಿಂದ ಸಹ ಪ್ರಯಾಣಿಕರಿಗೆ, ಪೊಲೀಸರಿಗೆ ಆತಂಕ ಹುಟ್ಟಿಸಿದೆ.
ಇದನ್ನೂ ಓದಿ: ಅಶೋಕ್ ಕರೊನಾ ಉಸ್ತುವಾರಿ ತಾತ್ಕಾಲಿಕ?
ಉಡುಪಿ ಪೊಲೀಸರಿಂದ ಬಂಧಿತನಾಗಿದ್ದವನನ್ನು ಧಾರವಾಡ ಪೊಲೀಸರು ತನಿಖೆಗೆ ಪಡೆದಿದ್ದರು. ನಂತರ ಶಿರಸಿಯಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಜೂ. 24 ರಂದು ಶಿರಸಿ ಶಹರ ಠಾಣೆ ಪೊಲೀಸರು ಆತನನ್ನು ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದಿದ್ದರು. ನ್ಯಾಯಾಧೀಶರ ಸೂಚನೆಯಂತೆ ಆತನನ್ನು ಕರೊನಾ ಪರೀಕ್ಷೆಗೆ ಒಳಪಡಿಸಿದಾಗ ಆತನಿಗೆ ರೋಗ ಇರುವುದು ಖಚಿತವಾಗಿತ್ತು.