ಹೈದರಾಬಾದ್: ತೆಲುಗು ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆ ಸಮಯದಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರಿಂದ ಬಂಧನವಾಗಿರುವ ಬಿಗ್ಬಾಸ್ ವಿಜೇತ ಪಲ್ಲವಿ ಪ್ರಶಾಂತ್ ಅವರಿಗೆ ನ್ಯಾಯಾಲಯ ಶಾಕ್ ನೀಡಿದೆ.
ಪಲ್ಲವಿ ಪ್ರಶಾಂತ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನಾಂಪಲ್ಲಿ ನ್ಯಾಯಾಲಯ ತಿರಸ್ಕರಿಸಿದೆ. ಡಿ.17ರಂದು ತೆಲುಗು ಬಿಗ್ಬಾಸ್ ಸೀಸನ್-7 ಮುಕ್ತಾಯವಾಯಿತು. ಪಲ್ಲವಿ ಪ್ರಶಾಂತ್ ವಿಜೇತರಾಗಿ ಹೊರಹೊಮ್ಮಿದರೆ, ಅಮರ್ದೀಪ್ ಚೌಧರಿ ರನ್ನರ್ ಅಪ್ ಆದರು.
ಪಲ್ಲವಿ ಪ್ರಶಾಂತ್ ಅವರನ್ನು ಬಿಗ್ ಬಾಸ್ ಕಾರ್ಯಕ್ರಮದ ವಿಜೇತ ಎಂದು ಘೋಷಿಸಿದ ಬೆನ್ನಲ್ಲೇ ಅವರ ಅಭಿಮಾನಿಗಳು ಅಮರ್ದೀಪ್ ಚೌಧರಿ ಅವರ ಕಾರಿನ ಮೇಲೆ ದಾಳಿ ಮಾಡಿ, ದಾಂಧಲೆ ನಡೆಸಿದರು. ಇದೇ ಗಲಾಟೆಯಲ್ಲಿ ಸರ್ಕಾರಿ ಆಸ್ತಿಗೂ ಹಾನಿಯುಂಟಾಗಿದೆ. ಗಲಾಟೆ ಜೋರಾಗುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಜುಬಿಲಿ ಹಿಲ್ಸ್ ಪೊಲೀಸರು ಗಲಾಟೆಯನ್ನು ತಣ್ಣಾಗಿಸಿದರು. ಮಾರನೇ ದಿನ ಅಂದರೆ ಡಿ. 18ರಂದು ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಲ್ಲವಿ ಪ್ರಶಾಂತ್ (ಎ1 ಆರೋಪಿ) ಮತ್ತು ಅವರ ಸಹೋದರ ಮನೋಹರ್ (ಎ2) ಅವರನ್ನು ಜುಬಿಲಿ ಹಿಲ್ಸ್ ಪೊಲೀಸರು ಬಂಧಿಸಿದರು. ಗಜ್ವೆಲ್ನ ಕೊಲ್ಲೂರಿನಲ್ಲಿ ಬಂಧಿಸಲಾಯಿತು.
ಬಂಧನ ಬಳಿಕ ನ್ಯಾಯಾಲಯವು ಪ್ರಶಾಂತ್ ಮತ್ತು ಆತನ ಸಹೋದರನಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಸರ್ಕಾರಿ ಮತ್ತು ಖಾಸಗಿ ಆಸ್ತಿಯನ್ನು ಹಾನಿ ಮಾಡಿದ್ದಕ್ಕೆ ನ್ಯಾಯಾಲಯ ಈ ಕ್ರಮ ತೆಗೆದುಕೊಂಡಿದೆ. ಇದೀಗ ಇಬ್ಬರೂ ಚಂಚಲಗುಡ ಜೈಲಿನಲ್ಲಿದ್ದಾರೆ. ಇದರ ನಡುವೆ ಪ್ರಶಾಂತ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಇದೀಗ ಆ ಅರ್ಜಿಯನ್ನು ಕೂಡ ನಾಂಪಲ್ಲಿ ನ್ಯಾಯಾಲಯ ವಜಾ ಮಾಡಿದ್ದು, ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಹೀಗಾಗಿ ತೀರ್ಪು ಬರೋವರೆಗೂ ಪ್ರಶಾಂತ್ ಜೈಲಿನಲ್ಲಿ ಖೈದಿಯಾಗಿಯೇ ಇರಬೇಕಾಗುತ್ತದೆ.
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ 16 ಮಂದಿಯನ್ನು ಹೈದರಾಬಾದ್ ಪೊಲೀಸರು ಬಂಧನ ಮಾಡಿದ್ದಾರೆ. ಅದರಲ್ಲಿ ನಾಲ್ವರು ಅಪ್ರಾಪ್ತರು ಎಂದು ತಿಳಿದುಬಂದಿದೆ. ಡಿ.17 ರಾತ್ರಿ ನಡೆದ ಗಲಾಟೆ ವೇಳೆ ಪ್ರಶಾಂತ್ ಅಭಿಮಾನಿಗಳು ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಟಿಎಸ್ಆರ್ಟಿಸಿ) ಆರು ಬಸ್ಗಳನ್ನು ಹಾನಿಗೊಳಿಸಿದ್ದಾರೆ. ಅಲ್ಲದೆ, ಪೊಲೀಸ್ ವಾಹನ ಮತ್ತು ಖಾಸಗಿ ವಾಹನಗಳಿಗೂ ಹಾನಿಯಾಗಿದೆ.
ಬಿಗ್ಬಾಸ್ ವಿಜೇತರ ಘೋಷಣೆಯಾದ ತಕ್ಷಣ, ಪ್ರಶಾಂತ್ ಅವರ ಅನುಯಾಯಿಗಳು ಸಂಭ್ರಮಾಚರಣೆ ಆರಂಭಿಸಿದರೆ, ಅಮರ್ ದೀಪ್ ಬೆಂಬಲಿಗರು ತೀರ್ಪನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿದರು. ಇದು ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಯಿತು. ಎಂದು ತಿಳಿದುಬಂದಿದೆ. (ಏಜೆನ್ಸೀಸ್)
ಹೊಸ ವ್ಯವಹಾರಕ್ಕೆ ಸ್ಟಾರ್ ನಟ ಎಂಟ್ರಿ; ISPL ಹೈದರಾಬಾದ್ ತಂಡದ ಮಾಲೀಕ ರಾಮ್ ಚರಣ್
ಪ್ರತಾಪ್ ಸಿಂಹ ತಮ್ಮನ ವಿರುದ್ಧ ಗಂಭೀರ ಆರೋಪ ಮಾಡಿ ವಿಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್