ಬೆಂಗಳೂರು: ನೋಂದಣಿ ಮಾಡಿಸದೆ ಸಾರಿಗೆ ಇಲಾಖೆಗೆ ತೆರಿಗೆ ವಂಚಿಸಲು ಹೋದ ಉದ್ಯಮಿ ಯೊಬ್ಬರೀಗ 83 ಲಕ್ಷ ರೂ. ಬೆಲೆಬಾಳುವ ಬೆಂಝ್ ಕಾರನ್ನೇ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಜಪ್ತಿಯಾಗಿರುವ ಕಾರು ಬಿಎಸ್-4 ಇಂಜಿನ್ ಆಗಿರುವ ಕಾರಣ ಈಗ ತೆರಿಗೆ ಪಾವತಿಸಿ ನೋಂದಣಿ ಮಾಡಿಸಿಕೊಳ್ಳಲೂ ಅನುಮತಿ ಇಲ್ಲ.
ಇದನ್ನೂ ಓದಿ: ಬದುಕನ್ನೇ ಕಸಿಯುತ್ತಿದೆ ಬಾಲ ದೌರ್ಜನ್ಯ!
ಬೆಂಗಳೂರಿನ ಹೈ ವಿಂಗ್ಸ್ ಕಾಂಕ್ರೀಟ್ ಪ್ರಾಡಕ್ಟ್ ಎಂಬ ಕಂಪನಿ ಹೆಸರಿನಲ್ಲಿರುವ ಬೆಂಝ್ ಕಾರನ್ನು ಆರ್ಟಿಒ ಅಧಿಕಾರಿಗಳು ಬುಧವಾರ ಜಪ್ತಿ ಮಾಡಿದ್ದಾರೆ. 2019ರ ಜೂನ್ನಲ್ಲಿ 83 ಲಕ್ಷ ರೂ.ಗೆ ಕಾರು ಖರೀದಿಸಿದ್ದು, -ಠಿ;19.73 ಲಕ್ಷ ತೆರಿಗೆ ಪಾವತಿಸಬೇಕಿದೆ.
ಯಶವಂತಪುರ ಆರ್ಟಿಒ ಅಧಿಕಾರಿ ಬುಧವಾರ ಬೆಳಗ್ಗೆ ಕಚೇರಿಗೆ ಬರುತ್ತಿದ್ದಾಗ ಬೆಂಝ್ ಕಾರು ಗಮನಿಸಿದ್ದಾರೆ. ತಾತ್ಕಾಲಿಕ ನಂಬರ್ ಪ್ಲೇಟ್ ಹಾಕಿದ್ದರಿಂದ ಅನುಮಾನ ಬಂದಿದೆ. ಕಾರು ಸದಾಶಿವನಗರ ಕಡೆ ಹೋಗಿದ್ದನ್ನು ಗಮನಿಸಿದ ಅವರು ಕೂಡಲೇ ಸದಾಶಿವನಗರ ಠಾಣೆ ಎಎಸ್ಐಗೆ ಕರೆ ಮಾಡಿ ತಿಳಿಸಿದ್ದರು. ಅದೇ ವೇಳೆಗೆ ಠಾಣೆ ಮುಂಭಾಗದ ಸಿಗ್ನಲ್ನಲ್ಲೇ ಕಾರು ನಿಂತಿರುವುದನ್ನು ಗಮನಿಸಿದ ಎಎಸ್ಐ ಕಾರು ತಡೆದು ಠಾಣೆ ಆವರಣದೊಳಗೆ ನಿಲ್ಲಿಸಿದ್ದರು.
ಇನ್ಸ್ಪೆಕ್ಟರ್ಗಳಾದ ರಾಜಣ್ಣ ಹಾಗೂ ಸುಧಾಕರ್ ಬಂದು ಪರಿಶೀಲಿಸಿದಾಗ ವಾಹನ ನೋಂದಣಿಯೇ ಆಗಿಲ್ಲ ಎಂಬುದು ದೃಢಪಟ್ಟಿದೆ. ಬಿಎಸ್-4 ಇಂಜಿನ್ ವಾಹನ ನೋಂದಣಿಗೆ ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿದೆ. ಆದ್ದರಿಂದ ಬಾಕಿ ತೆರಿಗೆ ಪಾವತಿಸಿ ಈಗ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ಇಲ್ಲ. ಕೋರ್ಟ್ಗೆ ಹೋಗಿ ಅಲ್ಲಿಂದ ಅನುಮತಿ ಸಿಕ್ಕರಷ್ಟೇ ಕಾರು ನೋಂದಣಿ ಮಾಡಿಸಿಕೊಂಡು ಕೊಂಡೊಯ್ಯಲು ಮಾಲೀಕರಿಗೆ ಅವಕಾಶ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕ್ವಾರಂಟೈನ್ ಮುಗಿಸಿದ ಯುವಕನಿಗೂ ಪಾಸಿಟಿವ್
ಆರ್ಟಿಒ ಕಚೇರಿಯಲ್ಲೇ ಉಳಿದ 71 ವಾಹನಗಳು
ಬೆಂಗಳೂರು: ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ರಾಜಾಜಿನಗರ ಕಚೇರಿ (ಪಶ್ಚಿಮ) ವ್ಯಾಪ್ತಿಯಲ್ಲಿ ವಿವಿಧ ಮಾದರಿಯ ವಾಹನಗಳನ್ನು ವಶಪಡಿಸಿ ಕೊಳ್ಳಲಾಗಿತ್ತು. ಆದರೆ, 71 ವಾಹನಗಳನ್ನು ವಾಪಸ್ ಪಡೆಯಲು ಮಾಲೀಕರೇ ಹೋಗಿಲ್ಲ.
ವಿವಿಧ 71 ಮಾದರಿಯ ವಾಹನಗಳನ್ನು ವಶಪಡಿಸಿಕೊಂಡು ಪೀಣ್ಯ ಚಾಲನಾ ಪಥ ಮತ್ತು ಬಿಎಂಟಿಸಿ ಡಿಪೋಗಳಲ್ಲಿ ನಿಲ್ಲಿಸಲಾಗಿದೆ.
ಈ ವಾಹನಗಳ ಮಾಲೀಕರು, ವಾರಸುದಾರರು ಮತ್ತು ಫೈನಾನ್ಸ್ಗಳು ಕಚೇರಿಗೆ ಹಾಜರಾಗಿ ಬಾಕಿ ಇರುವ ತೆರಿಗೆ ಮತ್ತು ದಂಡ ಪಾವತಿಸಿ ಪ್ರಕರಣಗಳನ್ನು ಮುಕ್ತಾಯಗೊಳಿಸಿಕೊಂಡು ವಾಹನ ಪಡೆಯುವಂತೆ ಅಂಚೆ ಮೂಲಕ ನೋಟಿಸ್ ಕಳುಹಿಸಲಾಗಿದೆ. ಆದರೂ 71 ವಾಹನಗಳನ್ನು ತೆಗೆದುಕೊಂಡು ಹೋಗಿಲ್ಲ. ನಿಗದಿತ ಅವಧಿಯೊಳಗೆ ಮಾಲೀಕರು ಬರದಿದ್ದರೆ ವಾಹನಗಳನ್ನು ಹರಾಜು ಮಾಡಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.