ಬಳ್ಳಾರಿ: ಜಿಲ್ಲೆಯಲ್ಲಿ ಕಳೆದೊಂದು ತಿಂಗಳಲ್ಲಿ ಕರೊನಾ ಸೋಂಕಿತರ ಪ್ರಮಾಣ ಗಣನೀಯ ಏರಿಕೆ ಕಂಡಿದೆ. ಸೋಂಕು ಹೆಚ್ಚಳಕ್ಕೆ ಅಂತಾರಾಜ್ಯ ನಂಟೂ ಕಾರಣ ಎಂದು ಆಂಧ್ರ-ತೆಲಂಗಾಣ ಪ್ರಯಾಣಿಕರ ಜಿಲ್ಲೆ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ.
ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆಂಧ್ರದ ಅನಂತಪುರ ಹಾಗೂ ಕರ್ನೂಲ್ ಜಿಲ್ಲೆ ಜನರು ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದಂತೆ ನಗರದ ವಿಮ್ಸ್ ಅವಲಂಬಿಸಿದ್ದಾರೆ. ನಿತ್ಯವೂ ರೋಗಿಗಳು ಬರುತ್ತಿದ್ದು, ಈ ಪೈಕಿ ಹಲವರಿಗೆ ಕರೊನಾ ದೃಢಪಟ್ಟಿದ್ದು, ಕೆಲವರು ಮೃತಪಟ್ಟಿದ್ದಾರೆ.
ಕಳೆದ ಒಂದು ವಾರದಲ್ಲಿ ವಿಮ್ಸ್ ಆಸ್ಪತ್ರೆಯ ವೈದ್ಯರು, ಶುಶ್ರೂಷಕರು, ಪ್ರಯೋಗಾಲಯ ತಂತ್ರಜ್ಞರಿಗೂ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಸೋಂಕು ಮತ್ತಷ್ಟು ಹರಡುವುದನ್ನು ತಡೆಯಲು ಈ ಕ್ರಮಕೈಗೊಳ್ಳಲಾಗಿದೆ. ಸೇವಾ ಸಿಂಧು ಅರ್ಜಿ ದೃಢೀಕರಣ ಪ್ರತಿ ಹೊಂದಿದವರಿಗೂ ಈ ಆದೇಶ ಅನ್ವಯವಾಗುವುದಿಲ್ಲ.