ಸೊರಬ: ಜೇನು ನಾಶ ಹೊಂದಿದರೆ ಮಾನವ ಕುಲಕ್ಕೆ ಆಪತ್ತು ಎದುರಾಗಲಿದೆ. ಹೀಗಾಗಿ ಜೇನು ಸಂರಕ್ಷಣೆ, ಕೃಷಿಗೆ ಒತ್ತು ನೀಡುವ ಅಗತ್ಯವಿದೆ ಎಂದು ಜಿಲ್ಲಾ ಹಾಪ್ಕಾಮ್ಸ್ ಅಧ್ಯಕ್ಷ ಕೆ.ವಿ.ಗೌಡ ಹೇಳಿದರು.
ತಾಲೂಕಿನ ತಲಕಾಲಕೊಪ್ಪ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ, ನಿಸರಾಣಿ ಗ್ರಾಮದ ಮಧುಬನ ಜೇನು ಸಂಸ್ಕರಣೆ ಮತ್ತು ಮಾರಾಟ ಸಹಕಾರ ಸಂಘದ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜೇನುಕೃಷಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜೇನು ನೋಣಗಳು ಪರಿಸರ ಹಾಗೂ ಮಾನವ ಸಮುದಾಯಕ್ಕೆ ಅತಿ ಉಪಯುಕ್ತ ಜೀವಿಗಳು. ಜೇನು ಸಾಕಣೆಗೆ 300 ವರ್ಷಗಳ ಇತಿಹಾಸವಿದೆ. ರಾಜ್ಯದಲ್ಲಿ ಜೇನು ಸಾಕಣೆ ಕೃಷಿ, ಅರಣ್ಯ, ತೋಟಗಾರಿಕೆ ಆಧಾರಿತವಾಗಿದ್ದು, ರೈತರಿಗೆ ಲಾಭ ತಂದುಕೊಡುವ ಉಪಕಸುಬು ಎಂದರು.
ಸಹಕಾರ ಸಂಘದ ಕಾರ್ಯದರ್ಶಿ ವಿಘ್ನೇಶ್ ಮಾತನಾಡಿ, ಜೇನು ಅಮೃತಕ್ಕೆ ಸಮಾನ. ಜೇನು ಕೃಷಿಯಲ್ಲಿ ಮಳೆಗಾಲ ಅಭಾವದ ಕಾಲ, ಚಳಿಗಾಲ ಅಭಿವೃದ್ಧಿಯ ಕಾಲ, ಬೇಸಿಗೆ ತುಪ್ಪದ ಕಾಲ. ಒಂದು ಪೆಟ್ಟಿಗೆಯಿಂದ ವರ್ಷಕ್ಕೆ 8ರಿಂದ 10 ಕೆ.ಜಿ ತುಪ್ಪ ತೆಗೆಯಬಹುದು. ಇದರಿಂದ ಉತ್ತಮ ಲಾಭವಿದೆ. ಅಲ್ಲದೆ ಜೇನಿನ ಪರಾಗ ಸ್ಪರ್ಶದಿಂದ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ಹೇಳಿದರು.
ಜೇನು ಸಂಸ್ಕರಣೆ ಮತ್ತು ಮಾರಾಟ ಸಹಕಾರ ಸಂಘದ ಪ್ರಭಾರ ಅಧ್ಯಕ್ಷ ಸುದರ್ಶನ್, ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ದೊರೆರಾಜ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಜೈಶೀಲ ಗೌಡ, ರಂಗಪ್ಪ ಇತರರಿದ್ದರು.