ಕೊಡಗು : ಶನಿವಾರಸಂತೆಯಿಂದ ದುಂಡಳ್ಳಿ-ಬಿಳಹ ಮಾರ್ಗವಾಗಿ ಯಸಳೂರುಗೆ ಸಂಪರ್ಕ ಕಲ್ಪಿಸುವ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ವಿಸ್ತರಣೆ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ಇರುವ ಮರಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಇತ್ತೀಚೆಗೆ ಕೆಲವು ಗ್ರಾಮಸ್ಥರು ಶನಿವಾರಸಂತೆ ಅರಣ್ಯ ಇಲಾಖೆ ಕಚೇರಿ ಮುಂದೆ ಜಮಾಯಿಸಿ ಆಗ್ರಹಿಸಿದರು.
ರಸ್ತೆ ವಿಸ್ತರಣೆ ಮಾಡಲು ಮುಂದಾದ ವೇಳೆ ಮರಗಳನ್ನು ತೆರವುಗೊಳಿಸದಂತೆ ಪರಿಸರ ಪ್ರೇಮಿಗಳು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮರಗಳನ್ನು ತೆರವುಗೊಳಿಸಲು ಹಿಂದೇಟು ಹಾಕಿದ್ದರು. ಇದರಿಂದ ರಸ್ತೆ ವಿಸ್ತರಣೆಗೆ ತೊಡಕಾಗಿತ್ತು.
ಈ ಸಂಬಂಧ ಶನಿವಾರಸಂತೆ ಅರಣ್ಯ ಇಲಾಖೆ ಕಚೇರಿಯಲ್ಲಿ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಮತ್ತು ಪ್ರಮುಖರ ಸಭೆ ಆಯೋಜಿಸಲಾಗಿತ್ತು. ಆ ವೇಳೆ ಒಂದು ವಾರದೊಳಗೆ ಮರ ತೆರವು ಮಾಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದರು.
ಆದರೆ ವಾರ ಕಳೆದು ಹಲವು ದಿನಗಳಾದರೂ ಕೂಡ ಮರಗಳನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಚೇರಿ ಮುಂದೆ ಜಮಾಯಿಸಿ ಈ ಸಂಬಂಧ ಅರಣ್ಯ ಇಲಾಖೆ ಕ್ರಮ ಕೈಗೊಳ್ಳದಿದ್ದರೆ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಆರ್ಎಫ್ಒ ಗಾನಶ್ರೀ ಅವರಿಗೆ ಎಚ್ಚರಿಕೆ ನೀಡಿದರು.
ಅಲ್ಲದೆ ಈ ಕುರಿತು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಇ-ಮೇಲ್ ಮೂಲಕ ದೂರು ನೀಡಿದ್ದರು, ಈ ಸಂಬಂಧ ಅದೇ ದಿನ ಸಂಜೆ ಸೋಮವಾರಪೇಟೆ ತಹಸೀಲ್ದಾರ್ ನವೀನ್ ಕುಮಾರ್ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರೊಂದಿಗೆ ಚರ್ಚಿಸಿದ್ದರು. ಇನ್ನು ಒಂದು ವಾರದೊಳಗೆ ಬೇಡಿಕೆಯನ್ನು ಸರಿಪಡಿಸಿಕೊಡುವುದಾಗಿ ಭರವಸೆ ನೀಡಿದರು.
ಗ್ರಾಮದ ಮುಖಂಡರಾದ ಗಂಗನಳ್ಳಿ ಸುರೇಶ್, ದುಂಡಳ್ಳಿ ಶಂಭು, ಬಿಳಹ ನಾಗಣ್ಣ, ದುಂಡಳ್ಳಿ ಮೋಹನ್, ಶನಿವಾರಸಂತೆಯ ಎಸ್.ಎನ್.ರಘು ದುಂಡಳ್ಳಿ, ಬಿಳಹ, ತೋಯಳ್ಳಿ, ಶಿರಹ ಗ್ರಾಮಸ್ಥರು ಪಾಲ್ಗೊಂಡಿದ್ದರು.